ರೈತರ ಕೈಗೆ ಕೋಳ, ಸರ್ಕಾರದ ನೀಚ ಕೃತ್ಯ
ಉಪವಾಸ ಕುಳಿತು ಅಸ್ವಸ್ಥನಾದ ದಾವಣಗೆರೆಯ ರೈತ ರಾಜೇಸಾಬ್ ಮತ್ತು ಅಪರಾಧಿ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಒಂದೇ ಕೋಳ ಹಾಕಿದ್ದರು. ಈ ಕೋಳ ಭಾರಿ ಕ್ರಿಮಿನಲ್ ಗಳಿಗೆ ತೊಡಿಸುವ ಕೋಳವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಭಾರಿ ಟೀಕೆ, ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಘಟನೆಗೆ ಕಾರಣರಾದ ಮೂವರು ಪೇದೆಗಳನ್ನು ಅಮಾನತು ಮಾಡಲಾಗಿದೆ.
ಯಡಿಯೂರಪ್ಪ ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸುವುದು, ಇನ್ನೊಂದಡೆ ಉಳುವ ಯೋಗಿಯ ನೋಡಲ್ಲೀ ಎಂಬ ಗೀತೆಯನ್ನು ನಾಡಗೀತೆಯನ್ನಾಗಿ ಮಾಡುವುದು, ಬೆನ್ನಲ್ಲೇ ರೈತರ ಮೇಲೆ ಲಾಠಿ ಬೀಸುವುದು, ಬೂಟಿನ ರುಚಿ ತೋರಿಸುವುದು ಈ ವರೆಗೂ ಮಾಮೂಲಾಗಿತ್ತು. ಇದೀಗ ಒಂದೆಜ್ಜೆ ಮುಂದೆ ಹೋಗಿರುವ ಯಡಿಯೂರಪ್ಪ, ಮೂಲಭೂತ ಹಕ್ಕಿಗಾಗಿ, ನ್ಯಾಯಕ್ಕಾಗಿ, ಹೊಟ್ಟೆಪಾಡಿಗಾಗಿ ಹೋರಾಟ ನಡೆಸಿದ ರೈತನ ಕೈಗೆ ಕೋಳ ತೊಡಿಸಿರುವುದು ಅತ್ಯಂತ ಖಂಡನೀಯ ಕೃತ್ಯ. ತಪ್ಪು ಮಾಡದ ರೈತನನ್ನು ಹೀನವಾಗಿ ನಡೆಸಿಕೊಂಡಿದ್ದು ಕ್ಷಮಾರ್ಹವಲ್ಲ. ಪೇದೆಗಳನ್ನು ಅಮಾನತು ಮಾಡುವುದರ ಬದಲು ಜೈಲಿನ ಹಿರಿಯ ಅಧಿಕಾರಿಗಳು, ಎಸ್ಪಿಯಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕಿದೆ.