ರಟ್ಟಾಗದ ತೆಲಂಗಾಣದ ಗುಟ್ಟು
ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ನೇತೃತ್ವದಲ್ಲಿ ಆಂಧ್ರಪ್ರದೇಶ ಎಂಟು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ತೆಲುಗು ದೇಶಂ ಪಾರ್ಟಿ, ತೆಲಂಗಾಣ ರಾಷ್ಟ್ರೀಯ ಸಮಿತಿ, ಪ್ರಜಾರಾಜ್ಯ ಪಕ್ಷ, ಸಿಪಿಐ, ಸಿಪಿಎಂ, ಎಂಐಎಂ ಪಕ್ಷಗಳು ಸಭೆಯಲ್ಲಿ ಪಾಲ್ಗೊಂಡಿದ್ದವು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯದ ವಿವಾದದ ಕುರಿತು ಬಿರುಸುನ ಚರ್ಚೆ ನಡೆಯಿತು. ಪ್ರಜಾರಾಜ್ಯಂ ಪಕ್ಷದ ಮುಖ್ಯಸ್ಥ ಚಿರಂಜೀವಿ ಮಾತ್ರ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್, ಬಿಜೆಪಿ, ಟಿಡಿಪಿ ಬಾಯಿ ಬಿಡಲಿಲ್ಲ. ಸಿಪಿಎಂ, ಸಿಪಿಐ, ಟಿಆರ್ಎಸ್ ಪಕ್ಷಗಳು ಪ್ರತ್ಯೇಕ ರಾಜ್ಯಕ್ಕೆ ಸಮ್ಮತಿಸಿವೆ.
ಸಭೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚಿದಂಬರಂ, ಆಂಧ್ರಪ್ರದೇಶದ ಎಂಟು ಪಕ್ಷಗಳ ಆಸೆ ಆಕಾಂಕ್ಷೆಗಳನ್ನು ಆಲಿಸಲಾಗಿದೆ. ಇದರ ಸಂಪೂರ್ಣ ವರದಿಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನೀಡಲಾಗುವುದು. ಮುಂದಿನ ಕ್ರಮವನ್ನು ನಂತರ ತೆಗೆದುಕೊಳ್ಳಲಾಗುವುದು. ಆದರೆ, ಆಂಧ್ರಪ್ರದೇಶದ ಜನತೆ ಶಾಂತಿ ಕಾಪಾಡಬೇಕು. ಶಾಲಾ ಕಾಲೇಜುಗಳು ಸುಸೂತ್ರವಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿಕೊಂಡರು. ಒಟ್ಟಿನಲ್ಲಿ ಅತೀ ನಿರೀಕ್ಷೆ ಮೂಡಿಸಿದ್ದ ಸರ್ವ ಪಕ್ಷಗಳ ಸಭೆ ವಿಫಲವಾಗಿದೆ.