ಬಜೆಟ್ ನಂತರ ಸಂಪುಟ ಸರ್ಜರಿ: ಸಿಎಂ
ಭಿನ್ನಮತ ಶಮನಗೊಳಿಸಲು ಈ ಸಭೆ ಕರೆಯಲಾಗಿತ್ತು. ಇಡೀ ದಿನ ನಡೆದ ಸಭೆಯಲ್ಲಿ ಶಾಸಕರು ಮುಕ್ತವಾಗಿ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು. ಅತೃಪ್ತ ಶಾಸಕರೂ ತಮ್ಮಲ್ಲಿ ಮಡುಗಟ್ಟಿದ್ದ ಕೋಪ ತಾಪವನ್ನು ಹೊರಹಾಕಿದರು. ಕೆಲವರು ಮನಬಂದಂತೆ ಬ್ಯಾಟ್ ಬೀಸಿದರೆ, ಇನ್ನು ಕೆಲವರು ಸಿಕ್ಸರ್ ಬೌಂಡರಿಗಳ ಸುರಿಮಳೆಗರೆದರು.
ಸರಕಾರ ವಿಘ್ನಗಳಿಲ್ಲದೆ ಅವಧಿ ಪೂರ್ಣಗೊಳಿಸಬೇಕಾದರೆ ಕ್ಯಾಬಿನೆಟ್ ಹಾಗೂ ಸರಕಾರದಲ್ಲಿ ಹಲವು ಸುಧಾರಣೆ ಆಗಲೇಬೇಕು. ತಕ್ಷಣವೇ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಬೇಕು. ಕನಿಷ್ಠ ಹತ್ತು ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕರಾದ ಎಸ್ ಕೆ ಬೆಳ್ಳುಬ್ಬಿ, ಕಳಕಪ್ಪ ಬಂಡಿ, ನರಸಿಂಹ ನಾಯಕ, ಸಿಟಿ ರವಿ, ಚಿಕ್ಕನಗೌಡರ್ ಮತ್ತಿತರರು ಆಗ್ರಹಿಸಿದರು. ಯಡಿಯೂರಪ್ಪ ಶಾಂತ ಚಿತ್ತವಾಗಿ ಆಲಿಸಿದರು. ಶಾಸಕರು ಆಕ್ಷೇಪಿಸಿದ ವಿಷಯಗಳ ಮರುಮಾತನಾಡಲಿಲ್ಲ ಮತ್ತು ಸಿಡುಕಲಿಲ್ಲ ಎನ್ನುವುದು ವಿಶೇಷ. ನಂತರ ಮಾತನಾಡಿದ ಯಡಿಯೂರಪ್ಪ, ಬಜೆಟ್ ನಂತರ ಸಂಪುಟ ಪುನಾರಚನೆ ಮಾಡುವುದಾಗಿ ಹೇಳಿದರು. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಭರವಸೆ ನೀಡಿದರು.