ಸತ್ಯನ್ ಹೆಸರಲ್ಲಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
ಇತ್ತೀಚೆಗೆ ಮೈಸೂರಿನಲ್ಲಿ ಟಿಎಸ್ ಸತ್ಯನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಿದ ಸಂದರ್ಭದಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಕೆಪಿಎನ್-ಚುರುಮುರಿ ಡಾಟ್ ಕಾಂ 'ಟಿಎಸ್ ಸತ್ಯನ್ ಫೋಟೋ ಛಾಯಾಗ್ರಾಹಕರ ಪ್ರಶಸ್ತಿ' 15 ಸಾವಿರ ರುಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ. ಸತ್ಯನ್ ಅವರ ಜನ್ಮದಿನವಾದ ಡಿಸೆಂಬರ್ 18ರಂದು ಈ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಹಿರಿಯ ಪತ್ರಕರ್ತ ಕೆಬಿ ಗಣಪತಿ ತಿಳಿಸಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ತಂಬ್ರಹಳ್ಳಿ ಸುಬ್ರಮಣ್ಯ ಸತ್ಯನಾರಾಯಣ ಅಯ್ಯರ್ (ಟಿಎಸ್ ಸತ್ಯನ್) ತಮ್ಮ 86ನೇ ವಯಸ್ಸಿನಲ್ಲಿ ಡಿಸೆಂಬರ್ 13ರಂದು ಮೈಸೂರಿನಲ್ಲಿ ನಿಧನರಾಗಿದ್ದರು.
ಸತ್ಯನ್ ಅವರದು ಪರಿಪೂರ್ಣ ವ್ಯಕ್ತಿತ್ವ. ಸತ್ಯನ್ ಅವರು ಜೀವನ ಮೌಲ್ಯಗಳನ್ನು ಎತ್ತಿ ಹಿಡಿದಿದ್ದರು. ತಮ್ಮ ವಿಶೇಷ ಫೋಟೋಗಳ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಸತ್ಯನ್ ಅವರ ಸ್ಮಾರಕವನ್ನು ನಿರ್ಮಿಸುವ ಅಗತ್ಯವಿದೆ. ಈ ಬಗ್ಗೆ ಅವರ ಸ್ನೇಹಿತರು, ಅಭಿಮಾನಿಗಳು, ಶಿಷ್ಯ ವರ್ಗ ಎಲ್ಲರೂ ಸರಕಾರವನ್ನು ಒತ್ತಾಯಿಸಬೇಕಿದೆ ಎಂದು ಗಣಪತಿ ಅಭಿಪ್ರಾಯಪಟ್ಟರು.
ಔಟ್ ಲುಕ್ ಪತ್ರಿಕೆ ಸಂಪಾದಕ ಕೃಷ್ಣ ಪ್ರಸಾದ್, ಪ್ರೊ. ತಾತಾಚಾರ್, ಪ್ರೊ. ಸಿ ನಾಗಣ್ಣ, ಹಿರಿಯ ಪತ್ರಕರ್ತ ಕೃಷ್ಣ ವಟ್ಟಂ, ಕೆಪಿಎನ್ ಮುಖ್ಯಸ್ಥ ಸಾಗ್ಗರೆ ರಾಮಸ್ವಾಮಿ, ಸಾಹಿತಿ ಅರ್ಯಂಬ ಪಟ್ಟಾಭಿ, ಸತ್ಯನ್ ಅವರ ಕಿರಿಯ ಸಹೋದರ ಹಾಗೂ ವಿಜ್ಞಾನಿ ಟಿಎಸ್ ರಾಮಚಂದ್ರನ್ ಉಪಸ್ಥಿತರಿದ್ದರು.