ತಪ್ಪು ಮಾಡಿದ್ರೆ ಒದ್ದು ಬುದ್ಧಿ ಕಲಿಸಿ : ದೇವೇಗೌಡ
ನಗರದಲ್ಲಿರುವ ಕೊಳಗೇರಿಗಳ ಮುಖಂಡರು ಆಯೋಜಿಸಿದ್ದ ಸಭೆಯಲ್ಲಿ ಸೋಮವಾರ ಮಾತನಾಡಿದ ದೇವೇಗೌಡ, ನೈಸ್, ಮೈನ್ಸ್ ಮಾಲೀಕರ ಮತ್ತು ಸರಕಾರದ ವಿರುದ್ಧ ತಮ್ಮಎಂದಿನ ಶೈಲಿಯಲ್ಲಿ ಗದಾಪ್ರಹಾರ ನಡೆಸಿದರು.
ರಾಜ್ಯದ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ನ್ಯಾಯಾಲಯಕ್ಕೆ ನೀಡಿದ ತಪ್ಪು ವರದಿಯಿಂದ ನೈಸ್ ಕಂಪನಿಗೆ ಸುಮಾರು 5000 ಎಕರೆ ಸರಕಾರಿ ಪ್ರದೇಶವನ್ನು ಬಿಟ್ಟುಕೊಡಬೇಕಾಗಿದೆ. ಇದೆಲ್ಲವೂ ಅಡ್ವೋಕೇಟ್ ಜನರಲ್ ಮಾಡಿರುವ ಅವಾಂತರವಾಗಿದೆ. ಈ ಮೂಲಕ ನೈಸ್ ಕಂಪನಿಯೊಂದಿಗೆ ಅಡ್ವೋಕೇಟ್ ಜನರಲ್ ಮತ್ತು ಸರಕಾರ ಶಾಮೀಲಾಗಿರುವುದು ಸಾಬೀತಾಗಿದೆ ಎಂದು ಹರಿಹಾಯ್ದುರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರಕಾರ ಅತ್ಯಂತ ಕೆಟ್ಟ ಸರಕಾರ. ಈ ರಾಜ್ಯದ ಜನರ ದುರ್ದೈವ ಎನ್ನಬಹುದು. ನೈಸ್ ಕಂಪನಿ ಹಾಗೂ ಮೈನ್ಸ್ ಧಣಿಗಳ ಹಣದಿಂದ ಈ ಸರಕಾರ ನಡೆಯುತ್ತಿದೆ. ದುಡ್ಡಿನ ದರ್ಪ ಎಷ್ಟು ದಿನ ನಡೆಯಲಿದೆ? ದುಡ್ಡಿನಿಂದ ಮರೆಯುತ್ತಿರುವವರಿಗೆ ಸಾಮಾನ್ಯ ಜನರು ಒದ್ದು ಬುದ್ಧಿ ಕಲಿಸುವ ದಿನಗಳು ದೂರವಿಲ್ಲ ಎಂದು ಗೌಡರು ಅಭಿಪ್ರಾಯಪಟ್ಟರು. ಶೀಘ್ರದಲ್ಲೇ ಅದು ಬರಲಿದೆ ಎಂದು ದೇವೇಗೌಡ ಗುಡುಗಿದರು.