ನಾಯಿಗಳಂತೆ ಕಿತ್ತಾಡಿದ ನಮ್ಮ ಲೀಡರ್ಸ್, ಯಾರವರು?
ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ್ದ ಸ್ಪೀಕರ್ ಸ್ಥಾನಕ್ಕೆ ಇಂದು ನಿಗದಿಯಂತೆ ಚುನಾವಣೆ ನಡೆಯಬೇಕಿತ್ತು. ಆದರೆ, ಕನ್ನಡ ಚಿತ್ರರಂಗದ ಮೇರುನಟ ಡಾ ವಿಷ್ಣುವರ್ಧನ್ ಅವರ ಅಕಾಲಿಕ ಮರಣವೇ ವಿಧಾನಸೌಧದಲ್ಲಿ ನಡೆದ ದಾಂಧಲೆಗೆ ಕಾರಣವಾಯಿತು. ಚುನಾವಣೆ ಪ್ರಕ್ರಿಯೆಗಳು ಎಲ್ಲ ಮುಗಿದಿವೆ. ಸ್ಪೀಕರ್ ಚುನಾವಣೆ ನಂತರ ಕಲಾಪ ಮುಂದೂಡುವುದಾಗಿ ಯೋಜನೆ ಆಡಳಿತ ಪಕ್ಷದ್ದಾದರೆ, ಮೇರು ನಟ ನಿಧನರಾಗಿದ್ದಾರೆ, ಹೀಗಾಗಿ ಚುನಾವಣೆ ನಡೆಸುವುದು ಬೇಡ. ಇವತ್ತಿನ ಬದಲಿಗೆ ನಾಳೆ ಚುನಾವಣೆ ನಡೆಸಿದರಾಯಿತು ಎಂಬುದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಿಲುವು. ಈ ಕಾರಣದಿಂದ ಸದನ ರಣರಂಗವಾಯಿತು.
ಚುನಾವಣೆ ನಡೆಸಕೂಡದು ಎಂದು ಸರಕಾರದ ಕ್ರಮ ವಿರೋಧಿಸಿದ ಪ್ರತಿಪಕ್ಷಗಳ ಶಾಸಕರು ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಒಂದು ಹಂತದಲ್ಲಿ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಅವರು ಸ್ಪೀಕರ್ ಮುಂದಿದ್ದ ಮೈಕ್ ನ್ನು ಕಿತ್ತು ಬಿಸಾಡಿ ಕೂಗಾಟ ಆರಂಭಿಸಿದರು. ಆಗ ಮಾತಿನ ಚಟಮಕಿ ನಡೆಯಿತು. ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಇದು ಯಾವುದನ್ನು ಲೆಕ್ಕಿಸದ ಸರಕಾರ ಸ್ಪೀಕರ್ ಚುನಾವಣೆ ನಡೆಯಿತು. ಅಂತಿಮವಾಗಿ ಕೆ ಜಿ ಬೋಪಯ್ಯ ಅವರು ಸ್ಪೀಕರ್ ಆಗಿ ಆಯ್ಕೆಯಾದರು.
ಇಂದು ಸದನದಲ್ಲಿ ಪ್ರತಿಪಕ್ಷಗಳು ನಡೆದುಕೊಂಡ ರೀತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಲಿನ ಭಯ ಹಾಗೂ ಹತಾಶೆ ಮನೋಭಾವದ ಕೆಲಸ ಎಂದು ಅವರು ಟೀಕಿಸಿದ್ದಾರೆ. ಪ್ರತಿಯಾಗಿ ಮಾತನಾಡಿರುವ ಸಿದ್ಧರಾಮಯ್ಯ, ಸರಕಾರ ದುರುಳ ವರ್ತನೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.