ಸಿ ಅಶ್ವತ್ಥ್ ನಿಧನಕ್ಕೆ ಸನ್ಮಾನ್ಯ ಬಿಎಸ್ ಯಡಿಯೂರಪ್ಪ ಶೋಕ
ಅಶ್ವತ್ಥ್ ನಿಧನದ ಅಂಗವಾಗಿ ವಿಧಾನಮಂಡಲದ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಶ್ವತ್ಥ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ವಿಚಾರಿಸಿದ್ದರು. ಅಲ್ಲದೇ, ಅಶ್ವತ್ಥ್ ಅವರ ಆಸ್ಪತ್ರೆಯ ಅಷ್ಟೂ ಖರ್ಚನ್ನು ಸರಕಾರ ಭರಿಸಲಿದೆ ಎಂದು ಹೇಳಿಕೆ ನೀಡಿದ್ದರು.
ಅಶ್ವತ್ಥ ಅವರ ಪಾರ್ಥೀವ ಶರೀರವನ್ನು ಜೆಸಿ ರಸ್ತೆಯಲ್ಲಿ ರವೀಂದ್ರ ಕಲಾಕ್ಷೇತ್ರದ ಹಿಂಭಾಗ ಸಂಸ ಬಯಲು ರಂಗಮಂದಿರದಲ್ಲಿ ಮಧ್ಯಾಹ್ನ 3.30ಕ್ಕೆ ಸಾರ್ವಜನಿಕ ದರುಶನಕ್ಕೆ ಇಡಲಾಗುವುದು. ಸಂಜೆ 5 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತ ಶಿಶುನಾಳ ಷರೀಫರ 'ತರವಲ್ಲ ತಗೀ ನಿನ್ನ ತಂಬೂರಿ... 'ಕಾಮನಬಿಲ್ಲು ಚಿತ್ರದ 'ಉಳುವಾ ಯೋಗಿ ನೋಡಲ್ಲಿ 'ಎಂಬ ಮನೋಜ್ಞ ಗೀತೆಗಳನ್ನು ಹಾಡುವ ರಾಜ್ಯದ ಸಂಗೀತ ಪ್ರಿಯರ ಮನೆಮಾತಾಗಿದ್ದ ಅಶ್ವತ್ಥ್ ಅವರು ಗೀತೆ ಮುಗಿಸಿ ಎದ್ದು ಹೋಗಿದ್ದಾರೆ. ಅಶ್ವತ್ಥ್ ಕಂಠಸಿರಿಯಲ್ಲಿ ಹೊರಬಂದಿರುವ ಹಾಡುಗಳು ಮಾತ್ರ ಅಜರಾಮರವಾಗಿವೆ.