ರೇಣುಕಾಚಾರ್ಯ ವಜಾಕ್ಕೆ ತೀವ್ರಗೊಂಡ ಲಾಬಿ
ಭಿನ್ನಮತೀಯ ಶಾಸಕರಲ್ಲಿ ಪ್ರಮುಖರಾಗಿರುವ ಸಿಟಿ ರವಿ, ಎ ರಾಮದಾಸ್, ಅಪ್ಪುಚ್ಚು ರಂಜನ್ ಹಾಗೂ ಆನೇಕಲ್ ನಾರಾಯಣಸ್ವಾಮಿ ಅವರು ಇಂದು ಸಿಎಂ ನಿವಾಸ ಕೃಷ್ಣದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕಳಂಕಿತ ಸಚಿವ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ಪಕ್ಷದ ವರ್ಚಸ್ಸಿಗೆ ಭಾರಿ ಧಕ್ಕೆ ಉಂಟಾಗಲಿದೆ ಎಂದು ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಇಂದು ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಭರವಸೆ ನೀಡಿದ್ದಾರೆ.
ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡಲು ಸಿಎಂ ಕ್ರಮಕೈಗೊಳ್ಳದಿದ್ದರೆ ಬುಧವಾರ ಸ್ಪೀಕರ್ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಅಪ್ಪಚ್ಚು ರಂಜನ್ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ನಮ್ಮ ವೈಯಕ್ತಿಕ ಬೇಡಿಕೆಗಳು ಏನೂ ಇಲ್ಲ. ಪಕ್ಷದ ಹಿತಕ್ಕಾಗಿ ಕಳಂಕಿತ ಸಚಿವ ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎನ್ನುವ ಏಕೈಕ ಬೇಡಿಕೆ ಇದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ನಿಷ್ಠರ ಭಿನ್ನಮತ ಶಮನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಕಸರತ್ತು ನಡೆಸಿದ್ದು, ರೇಣುಕಾಚಾರ್ಯಗೆ ಸಂಬಂಧಿಸಿದಂತೆ ಎದ್ದಿರುವ ಭಿನ್ನಮತದ ಬಗ್ಗೆ ಶಾಸಕಾಂಗ ಸಭೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.