ರಾಸಲೀಲೆ : ತಿವಾರಿ ಅವರೊಬ್ಬರೇ ಅಲ್ಲರಿ
ಗಣಿ ಲೈಸೆನ್ಸ್ ಮತ್ತು ಮತ್ತಿತರರಿಗೆ ಉದ್ಯೋಗ ಕೊಡಿಸುವ ಆಮಿಷ ವೊಡ್ಡಿ ರಾಸಲೀಲೆಯಲ್ಲಿ ತೊಡಗಿ ನಂತರ ತಿವಾರಿ ಮೋಸ ಮಾಡಿದ್ದರಿಂದ ಸೆಕ್ಸ್ ಟೇಪನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾಗಿ ರಾಧಿಕಾ ಎಂಬ ಯುವತಿ ಹೇಳಿದ್ದಾಳೆ.
ಈ ಲೈಂಗಿಕ ಹಗರಣ ಕೇಂದ್ರ ಆಡಳಿತದಲ್ಲಿರುವ ಯುಪಿಎ ಸರಕಾರಕ್ಕೆ ಭಾರೀ ಮುಜುಗರ ಉಂಟುಮಾಡಿದೆ. ತಿವಾರಿ ಅವರನ್ನು ಮಾಜಿ ಪ್ರಧಾನಿ ದಿವಂಗತ ನರಸಿಂಹರಾವ್ ಅವರು ಪ್ರಧಾನಿ ಆಗುವ ಮೊದಲು ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲಾಗಿತ್ತು. ತಿವಾರಿ ಅವರು ಅಖಂಡ ಉತ್ತರ ಪ್ರದೇಶ ಮತ್ತು ಉತ್ತಾರಾಖಂಡದ ಮುಖ್ಯಮಂತ್ರಿ ಕೂಡ ಆಗಿದ್ದರು. ಅಂತಹ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿ ಇಂಥ ಹಗರಣದಲ್ಲಿ ಭಾಗಿಯಾಗಿದ್ದು ಕಾಂಗ್ರೆಸ್ಸಿನ ವರ್ಚಸ್ಸಿಗೆ ಧಕ್ಕೆ ತಂದಿದೆ.
ರಾಜೀನಾಮೆ ಅಂಗೀಕಾರ : ಅನಾರೋಗ್ಯದ ಕಾರಣ ನೀಡಿ ಸಲ್ಲಿಸಿರುವ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಗೀಕರಿಸಿದ್ದಾರೆ.
ಇದೊಂದೇ ಅಲ್ಲ : ಆದರೆ, ರಾಜಕಾರಣಿಗಳನ್ನು ಬೆನ್ನತ್ತಿರುವ ಸೆಕ್ಸ್ ಹಗರಣಗಳು ಇದು ಮೊದಲೇನಲ್ಲ. ಕಾಂಗ್ರೆಸ್, ಬಿಜೆಪಿ, ಆರ್ಎಸ್ಎಸ್ ಮುಖಂಡರನ್ನು ಕೂಡ ಲೈಂಗಿಕ ಹಗರಣಗಳು ಹಣ್ಣುನೀರು ಮಾಡಿವೆ. ಕೆಲವೇ ವಾರಗಳ ಹಿಂದೆ ಕೇರಳದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಜಮೋಹನ್ ಉನ್ನಿಥನ್ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದರು. ವೇಶ್ಯಾವಾಟಿಕೆಗೆ ಕುಮ್ಮಕ್ಕು ನೀಡಿದ ಆರೋಪ ಅವರ ಮೇಲಿದೆ.
ಕಳೆದ ಮಹಾಚುನಾವಣೆ ಸಮಯದಲ್ಲಿ ಸಮಾಜವಾದಿ ಪಕ್ಷದ ಜಯಪ್ರದಾ ಅವರ ನಗ್ನ ಚಿತ್ರಗಳನ್ನು ಎಲ್ಲೆಂದರಲ್ಲಿ ತೂರಾಡಿ ಅದೇ ಪಕ್ಷದ ಅಜಮ್ ಖಾನ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಚಿತ್ರಗಳು ತನ್ನವಲ್ಲವೇ ಅಲ್ಲ, ಅವು ಸೃಷ್ಟಿಸಿದವು ಎಂದು ಜಯಪ್ರದಾ ವಾದಿಸಿ ಚುನಾವಣೆಯಲ್ಲಿ ಜಯಪ್ರದರಾಗಿದ್ದರು.
ಹಿಂದೆ, 2005ರಲ್ಲಿ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಜಯ್ ಜೋಶಿ ಅವರು ಅಪರಿಚಿತ ಮಹಿಳೆಯೊಂದಿಗೆ ಕಾಮಕೇಳಿ ನಡೆಸಿದ ವಿಡಿಯೋ ಟೇಪ್ ಪಕ್ಷವನ್ನು ಮುಜುಗರಕ್ಕೀಡು ಮಾಡಿತ್ತು. 2003ರಲ್ಲಿ ಉತ್ತರ ಪ್ರದೇಶದ ಮಂತ್ರಿಯಾಗಿದ್ದ ಅಮರಮಣಿ ತ್ರಿಪಾಠಿ ಕವಯಿತ್ರಿ ಮಧುಮಿತಾ ಶುಕ್ಲಾ ಅವರೊಂದಿಗೆ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರು. ಭೀಕರವಾಗಿ ಕೊಲೆಯಾಗಿದ್ದ ಮಧುಮಿತಾ ಉದರದಲ್ಲಿದ್ದ ಮಗು ತ್ರಿಪಾಠಿಯದೇ ಎಂದು ಡಿಎನ್ಎ ಪರೀಕ್ಷೆ ದೃಢಪಡಿಸಿತ್ತು.