ನೇತ್ರಾವತಿ ಗೋಳು ಕೇಳುವವರು ಯಾರು?
ನೀರು ಎತ್ತರದಿಂದ ತಗ್ಗಿಗೆ ಹರಿಯುತ್ತದೆ, ಇದು ನಿಯಮ ಅನ್ನಿ ಅಥವಾ ವಾಸ್ತವ ಸತ್ಯ ಅನ್ನಿ. ಆದ್ದರಿಂದಲೇ ನದಿಗಳು ದಟ್ಟ ಅರಣ್ಯ, ಬೆಟ್ಟಗುಡ್ಡಗಳ ಮಧ್ಯೆ ಹುಟ್ಟಿ ಬಯಲುಗಳಲ್ಲು ಹರಿದು ಸಮುದ್ರ ಸೇರುತ್ತವೆ. ಒಂದರ್ಥದಲ್ಲಿ ನದಿಗಳ ನೀರು ಸಮುದ್ರಕ್ಕೆ ಸೇರುವ ಮೂಲಕ ಅದೆಷ್ಟು ವ್ಯರ್ಥವಾಗುತ್ತಿದೆ ಅನ್ನಿಸುತ್ತದೆ. ಬಯಲು ಸೀಮೆಗಳಲ್ಲಿ ನದಿಯಿಲ್ಲ, ಮಳೆಯೂ ಇಲ್ಲ ಅಂತ ರೈತರು ಗೊಣಗುತ್ತಾರೆ. ಆದರೆ ಸಮುದ್ರ ತಟದಲ್ಲಿ ವಾಸಿಸುವ ಮಂದಿಗೆ ನದಿಗಳು ಮೈದುಂಬಿ ಹರಿದು ಸಮುದ್ರ ಸೇರುತ್ತವೆ ಅದೂ ಕೂಡಾ ಯಾವುದೇ ಪ್ರಯೋಜನವಿಲ್ಲದೆ ಎಂದು ಮನಸ್ಸು ಮರುಗುತ್ತದೆ. ಒಂದು ವೇಳೆ ವ್ಯರ್ಥವಾಗಿ ಹೋಗುತ್ತಿರುವ ನದಿ ನೀರು ಬರದ ನಾಡಿನ ರೈತರಿಗೆ ಸಿಗುವಂತಿದ್ದರೆ ಅದೆಂಥ ಬೆಳೆ ಬೆಳೆಯುತ್ತಿದ್ದರಲ್ಲವೇ? ಎನ್ನುವ ಪ್ರಶ್ನೆಯೂ ಮೂಡುತ್ತದೆ.
ಹೌದು ಇಷ್ಟೆಲ್ಲ ಪೀಠಿಕೆ ಮಾತುಗಳು ಯಾಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಪ್ರತಿಯೊಂದಕ್ಕೂ ಕಾರಣವಿರುತ್ತದೆ. ನದಿ ಹುಟ್ಟುವುದಕ್ಕೆ, ಅದು ಸಮುದ್ರಾಭಿಮುಖವಾಗಿ ಹರಿಯುವುದಕ್ಕೆ ಕಾರಣವಿರುತ್ತದೆ. ಇದು ಪ್ರಕೃತಿಯ ನಿಯಮವೂ ಹೌದು. ಆದರೆ ಬುದ್ದಿವಂತರಾದ ನಮ್ಮಂಥ ಮನುಷ್ಯರು, ಪ್ರಶ್ನೆ ಮಾಡುವ ಪ್ರವೃತ್ತಿಯವರು ಅಥವಾ ಹೊಸಹೊಸ ಸಂಶೋಧನೆ ಮಾಡುವ ಹವ್ಯಾಸವುಳ್ಳವರು ನದಿಗಳನ್ನೂ ತಮ್ಮ ಪ್ರಯೋಗಶಾಲೆಗೆ ನುಗ್ಗಿಸಿಕೊಳ್ಳುತ್ತಾರೆ, ಪ್ರಕೃತಿಯ ನಿಯಮವನ್ನೇ ತಿದ್ದಲು ಮುಂದಾಗುತ್ತಾರೆ, ಇದನ್ನು ದುಸ್ಸಾಹಸ ಅಂತ ಕರೆಯುತ್ತೇನೆ ನಾನು ಹಾಗೇ ಸುಮ್ಮನೆ.
ಇಂಥ ದುಸ್ಸಾಹಸಕ್ಕೆ ಬಲಿಯಾಗುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ, ಧರ್ಮಸ್ಥಳದ ತೀರ್ಥನದಿ ನೇತ್ರಾವತಿ. ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುತ್ತಿರುವ ನೇತ್ರಾವತಿಯ ದಿಕ್ಕನ್ನೇ ಬದಲಿಸಲು ಬುದ್ದಿವಂಥ ಜನರು ಮುಂದಾಗಿದ್ದಾರೆ. ಕರಾವಳಿಯತ್ತ ಹರಿಯುವ ಈ ನದಿಯನ್ನು ಪೂರ್ವಾಭಿಮುಖವಾಗಿ ಹರಿಯುವಂತೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಇಂಜಿನಿಯರುಗಳು. ಅಧ್ಯಯನ ಮಾಡಲು ಕೋಟ್ಯಾಂತರ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ತಮ್ಮ ಹಿತಾಸಕ್ತಿ ಕಾಯುವ ರಾಜಕಾರಣಿಗಳು ನೇತ್ರಾವತಿಯನ್ನು ತುಮಕೂರು, ಕೋಲಾರ ಜಿಲ್ಲೆಗಳಿಗೆ ಹರಿಸಲು ಬೆವರು ಸುರಿಸುತ್ತಿದ್ದಾರೆ.
ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಬೆಳ್ತಂಗಡಿಯ ಉಜಿರೆಯಲ್ಲಿ ಜರುಗಿ ಇತಿಹಾಸದ ಪುಟಸೇರಿದ ಮೊಟ್ಟಮೊದಲ ವಿಶ್ವತುಳು ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಪೈಕಿ ನೇತ್ರಾವತಿ ನದಿ ತಿರುಗಿಸಬಾರದು ಎನ್ನುವುದೂ ಒಂದು. ನೇತ್ರಾವತಿ ನದಿ ಧರ್ಮಸ್ಥಳ ಕ್ಷೇತ್ರದ ತೀರ್ಥನದಿ. ಜಗತ್ತಿನ ಯಾವುದೇ ಮೂಲೆಯಿಂದ ಇಲ್ಲಿಗೆ ಬರುವವರು, ಕೋಲಾರ, ತುಮಕೂರು ಭಾಗದಿಂದ ಬರುವ ಮಂಜುನಾಥನ ಗರಿಷ್ಠ ಸಂಖ್ಯೆಯ ಭಕ್ತರು ಹೋಗುವಾಗ ಕೊಂಡೊಯ್ಯುವ ಪ್ಲಾಸ್ಟಿಕ್ ಬಾಟ್ಲಿಯಲ್ಲಿರುವ ತೀರ್ಥ ಈ ನೇತ್ರಾವತಿಯದು. ಬೆಳ್ತಂಗಡಿಯಿಂದ ಹಿಡಿದು ಮಂಗಳೂರುತನಕದ ಜನರು ಕುಡಿಯುವ ನೀರು ಈ ನೇತ್ರಾವತಿಯದು. ನೇತ್ರಾವತಿಯನ್ನು ಬಿಟ್ಟರೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ನವಮಂಗಳೂರು ಬಂದರು, ಕುದುರೆಮುಖ ಅದಿರು ಉಂಡೆಕಟ್ಟುವ ಸ್ಥಾವರ, ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ, ಮಂಗಳೂರು ತೈಲಾಗಾರ ಸಹಿತ ಇಲ್ಲಿರುವ ಎಲ್ಲಾ ಕೈಗಾರಿಕೆಗಳಿಗೆ ನೇತ್ರಾವತಿಯೇ ಆಧಾರ. ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ತಾಲೂಕಿನಲ್ಲಿ ಬೆಳೆಯುತ್ತಿರುವ ಅಡಿಕೆ ಸಹಿತ ಬೆಳೆಗಳಿಗೆ ನೇತ್ರಾವತಿಯೇ ಆಸರೆ. ಹಾಗಾದರೆ ನೇತ್ರಾವತಿಯನ್ನು ಪೂರ್ವಾಭಿಮುಖವಾಗಿ ತಿರುಗಿಸಿದರೆ ಇದನ್ನೇ ಆಶ್ರಯಿಸಿರುವ ಜನರು ಏನು ಮಾಡಬೇಕು? ಧರ್ಮಸ್ಥಳಕ್ಕೆ ನೀವು ಬಂದರೆ ಹೋಗುವಾಗ ಕೊಂಡೊಯ್ಯುವ ತೀರ್ಥಕ್ಕೆ ಕೊಳವೆಬಾವಿ ಕೊರೆಯಬೇಕೇ?
ಸ್ವಾಮೀ ಇದು ಆಧುನಿಕ ಯುಗ, ತಾಂತ್ರಿಕವಾಗಿ ಬಹಳಷ್ಟು ಮುಂದುವರಿದಿದ್ದೇವೆ ಇತ್ಯಾದಿ...ಇತ್ಯಾದಿ ಕಾಮೆಂಟ್ಗಳನ್ನು ಬುದ್ದಿವಂತ ಮಂದಿ ಬರೆಯುತ್ತಾರೆಂದು ಗೊತ್ತು. ಇಲ್ಲಿ ನಾನು ಎತ್ತಿರುವ ಮೂಲಭೂತ ಪ್ರಶ್ನೆ ಪ್ರಕೃತಿಯ ನಿಯಮಕ್ಕನುಗುಣವಾಗಿ ಹರಿಯುತ್ತಿರುವ ನದಿ ದಿಕ್ಕು ಬದಲಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು. ಜೊತೆಗೆ ನೇತ್ರಾವತಿ ಮಳೆಗಾಲದಲ್ಲಿ ಮಾತ್ರ ಉಕ್ಕಿಹರಿಯುತ್ತಾಳೆ, ಉಳಿದ ದಿನಗಳಲ್ಲಿ ಆಕೆ ಕಣ್ಣೀರಿಡುತ್ತಾಳೆ. ಇತ್ತೀಚಿನ ವರ್ಷಗಳಲ್ಲಿ ಬಡಕಲಾಗುತ್ತಿದ್ದಾಳೆ ಎನ್ನುವುದು ವಾಸ್ತವ ಸಂಗತಿ. ಆದರೆ ರಾಜಕಾರಣಿಗಳ ತೆವಲಿಗೆ ನೇತ್ರಾವತಿ ಬಲಿಯಾಗುತ್ತಿದ್ದಾಳೆ ಅನ್ನುವುದು ಆತಂಕದ ವಿಷಯ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ನದಿಗಳು ಪೂರ್ವದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಸಮುದ್ರ ಸೇರುತ್ತಿವೆ. ಈ ನದಿಗಳಿಗೆ ಅಲ್ಲಲ್ಲಿ ಚೆಕ್ಡ್ಯಾಮ್ ನಿರ್ಮಿಸುವ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ನದಿಗಳನ್ನು ಬಳಕೆ ಮಾಡಿಕೊಂಡು ಪ್ರವಾಸೋದ್ಯಮ ಅಭಿವೃದ್ದಿ ಪಡಿಸುವ ಯೋಜನೆಗಳೇ ಇಲ್ಲ. ಈಗ ಹೇಳಿ ಸರ್ಕಾರದ ಮೊದಲ ಆದ್ಯತೆ ಏನಾಗಬೇಕು? ನೇತ್ರಾವತಿ ನದಿಯ ದಿಕ್ಕು ಬದಲಿಸುವುದು ಅದೆಷ್ಟು ಸರಿ, ಇದು ಸಾಧ್ಯವೇ? ನದಿ ಸಂಸ್ಕೃತಿಯ ಮೂಲ. ನೇತ್ರಾವತಿ ತುಳು ಸಂಸ್ಕೃತಿ ಮೂಲನೆಲೆ-ಸೆಲೆ. ಇದನ್ನೇ ಹೈಜಾಕ್ ಮಾಡುವ ಹುನ್ನಾರವನ್ನು ಬೆಂಬಲಿಸುವುದು ಆತ್ಮವಂಚನೆ ಅಂದುಕೊಂಡಿದ್ದೇನೆ.