ರೇಣುಕ ಸಚಿವರಾಗಿ ಗುರುವಾರ ಪ್ರಮಾಣ ವಚನ
ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ನಾಳೆ ಬೆಳಗ್ಗೆ ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂದಿನ ವರ್ಷದ ಮಾರ್ಚ್ ನಲ್ಲಿ ಎಲ್ಲ ಸಚಿವರ ರಾಜೀನಾಮೆ ಪಡೆದು ಸಂಪುಟ ಪುನರ್ ರಚನೆ ಮಾಡುವುದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಗುರುವಾರ ಬೆಳಗ್ಗೆ 10.10 ರಿಂದ 10.30ರೊಳಗೆ ಪ್ರಮಾಣ ವಚನ ಸ್ವೀಕರಿಸುವ ಮಹೂರ್ತ ಫಿಕ್ಸ್ ಆಗಿದ್ದು, ರೇಣುಕಾಚಾರ್ಯ ಅವರಿಗೆ ವಸತಿ ಖಾತೆ ದೊರೆಯುವ ಸಾಧ್ಯತೆ ಇದೆ.
ಭಿನ್ನಮತೀಯ ಚಟುವಟಿಕೆ ನಡೆಸುವ ಮೂಲಕ ಪಕ್ಷಕ್ಕೆ ಘನತೆಗೆ ಧಕ್ಕೆ ತಂದಿರುವ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಬೆಂಗಳೂರು ನಗರ ಶಾಸಕರ ಗುಂಪೊಂದು ವಿರೋಧ ವ್ಯಕ್ತಪಡಿಸಿ ಶಾಸಕರ ಸಹಿ ಸಂಗ್ರಹಣೆ ನಡೆಸಿದ್ದರು. ಜೊತೆಗೆ ಬುಧವಾರವೇ ಶಾಸಕಾಂಗ ಸಭೆ ಕರೆಯಬೇಕು ಎಂದು ಶಾಸಕರು ಆಗ್ರಹಿಸಿದ್ದರು. ಇದರಿಂದಾಗಿ ಬಿಜೆಪಿ ಭಿನ್ನಮತ ಮತ್ತಷ್ಟು ಬಿಕ್ಕಟ್ಟಿಗೆ ಎಡೆಮಾಡಿಕೊಟ್ಟಿತ್ತು. ರೇಣುಕಾಚಾರ್ಯ ಅವರು ಸಚಿವರಾಗುವುದನ್ನು ವಿರೋಧಿಸಿದ ಬಣದ ವಿರುದ್ದ ರೇಣುಕಾಚಾರ್ಯ ಅವರ ಬೆಂಬಲಿಗರು ನಾವು ಸಹಿ ಸಂಗ್ರಹಣೆ ಮುಂದಾಗಿತ್ತು. ರೇಣುಕಾಚಾರ್ಯ ಏಕೆ ಸಚಿವರಾಗಬಾರದು ಎಂಬುದು ಅವರ ಪ್ರಶ್ನೆಯಾಗಿತ್ತು.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಬಿಜೆಪಿ ನಾಯಕರು ರೇಣುಕಾಚಾರ್ಯ ಅವರನ್ನು ವಿರೋಧಿಸುತ್ತಿರುವ ಬಣ ಶಾಸಕರ ಮನವೂಲಿಸಿ ತಣ್ಣಗಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರ ಮತ್ತು ಪಕ್ಷದ ಹಿತದೃಷ್ಟಯಿಂದ ವಿರೋಧವನ್ನು ಕೈಬಿಡಲಾಗಿದೆ ಎಂದು ರೇಣುಕಾಚಾರ್ಯ ವಿರೋಧಿ ಬಣದ ಗುಂಪಿನ ಶಾಸಕರಾದ ಸತೀಶೆ ರಡ್ಡಿ, ಎಸ್ ಆರ್ ವಿಶ್ವನಾಥ, ಸುರೇಶಗೌಡ ತಿಳಿಸಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಉಂಟಾಗಿದ್ದ ಮತ್ತೊಂದು ಸುತ್ತಿನ ಭಿನ್ನಮತ ಶಮನಗೊಂಡಂತಾಗಿದೆ. ಕಳೆದ ಎರಡು ತಿಂಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡೆದ್ದು, ಬ್ಲಾಕ್ ಮೇಲ್ ರಾಜಕಾರಣ ಮಾಡಿದ ರೇಣುಕಾಚಾರ್ಯ ಸಚಿವರಾಗಲಿದ್ದಾರೆ.