ಜ.6 ರಿಂದ ಆಳ್ವಾಸ್ ವಿರಾಸತ್ -2010
ಸತತ 14 ವರ್ಷಗಳಿಂದ ಜಗತ್ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ವೈಭವಯುತವಾಗಿ ನಡೆಯುತ್ತಿರುವ ಆಳ್ವಾಸ್ ವಿರಾಸತ್ನಲ್ಲಿ ಈ ಬಾರಿ ಪಂಡಿತ್ ತರುಣ್ ಭಟ್ಟಾಚಾರ್ಯ, ಪಂಡಿತ್ ಅಭಿಜಿತ್ ಬ್ಯಾನರ್ಜಿ, ತೌಷಿಕ್ ಕುರೇಶಿ, ಕದ್ರಿ ಗೋಪಾಲ್ನಾಥ್, ಪ್ರವೀಣ್ ಗೋಡ್ಕಿಂಡಿ, ಪುರ್ಬುಯಾನ್ ಚಟರ್ಜಿ, ಶರ್ಮಿಳಾ ಬಿಸ್ವಾಸ್, ಎಂ.ಎನ್. ಶಾಸ್ತ್ರಿ, ಅಜಯ್ ವಾರಿಯರ್ ಮೊದಲಾದ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಜ.6 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿ ಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಜ.2ರಿಂದ 9ರವರೆಗೆ ದೇಶದ ಆಯ್ದ ಪ್ರಸಿದ್ಧ 30 ಕಲಾವಿದರಿಂದ ಆಳ್ವಾಸ್ ವರ್ಣ ವಿರಾಸತ್, ಜ.3 ರಂದು ಆಳ್ವಾಸ್ ವರ್ಣ ಜಾಗೃತಿ ಮೂಲಕ ರಾಜ್ಯದ ಬೇರೆಬೇರೆ ಭಾಗಗಳಿಂದ ಸುಮಾರು 700 ಕಲಾವಿದರಿಂದ 750 ಮೀಟರ್ ಉದ್ದದ ಕ್ಯಾನ್ವಾಸ್ ಚಿತ್ರ ಬರೆಯಲಾಗುವುದು ಎಂದು ವಿವರಿಸಿದರು.