ಬಿಐಎಎಲ್ ಗೆ ಕೆಂಪೇಗೌಡರ ಹೆಸರು
ಜಂಟಿ ಸದನ ಸಮಿತಿಯ ಅಧ್ಯಕ್ಷ ಡಾ ಹೇಮಚಂದ್ರ ಸಾಗರ್ ವಿಧಾನಸಭೆಯಲ್ಲಿಂದು ವರದಿಯನ್ನು ಮಂಡಿಸಿದರು. ನಿಲ್ದಾಣದ ಗುಣಮಟ್ಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಯೋಜನೆಯ ಪಾಲುದಾರರಾದ ಎಲ್ ಅಂಡ್ ಟಿ, ಸೀಮ್ಸ್ ಇಂಡಿಯಾ ಹಾಗೂ ರೂರಿಚ್ ಕಂಪನಿಗಳಿಗೆ ಕನಿಷ್ಟ 5 ವರ್ಷದ ಮಟ್ಟಿಗೆ ಯಾವುದೇ ಗುತ್ತಿಗೆ ನೀಡಬಾರದು ಎಂದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸರಿಹೊಂದುವ ಗುಣಮಟ್ಟ ಕಾಪಾಡಲು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಖಾಸಗಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಅವರು ಸರಕಾರವನ್ನು ಒತ್ತಾಯಿಸಿದರು. ಸೆಸ್ ವ್ಯಾಟ್ ಮೂಲಕ ಜಮಾಗೊಂಡಿರುವ 67 ಕೋಟಿ ರುಪಾಯಿ ಹಾಗೂ ಆಕಸ್ಮಿಕ ನಿಧಿಯಿಂದ ಸಂಗ್ರಹವಾಗಿರುವ 33.26 ಕೋಟಿ ರುಪಾಯಿ ಸೇರಿ ಒಟ್ಟು 100.26 ಕೋಟಿ ರುಪಾಯಿ ಹಣವನ್ನು ವಿಮಾನ ನಿಲ್ದಾಣ ನಿಗಮದಿಂದ ವಸೂಲು ಮಾಡಬೇಕು. ಅಲ್ಲಿಯವರೆಗೂ ನಿಗಮಕ್ಕೆ ಯಾವುದೇ ಹಣ ಬಿಡುಗಡೆ ಮಾಡಬಾರದು ಎಂದು ಸರಕಾರಕ್ಕೆ ಸೂಚನೆ ನೀಡಿದರು.
ಖಾಸಗಿ ಪ್ರವರ್ತಕರನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಣಾಮಕಾರಿ ಕ್ರಮಕೈಗೊಳ್ಳಬೇಕು. ಮೂಲಸೌಕರ್ಯಗಳ ಮೇಲಿನ ಭಾರಿ ಪ್ರಮಾಣದ ಹೂಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಖಾಸಗಿ ಪಾಲುದಾರರಿಂದ ಭರಿಸುವ ವೆಚ್ಚಗಳ ಸ್ವತಂತ್ರ ಅಂದಾಜಿಗಾಗಿ ವಿಮಾನಯಾನ ಘಟಕಕ್ಕೆ ಒಂದು ನಿಯಂತ್ರಣ ಸ್ಥಾಪಿಸಬೇಕು. ಸಾರ್ವಜನಿಕ ಸಹಭಾಗಿತ್ವದ ನೀತಿಯಲ್ಲಿ ಖಾಸಗಿ ಪಾಲುದಾರರು ಅಲ್ಪಾವಧಿ ಲಾಭವನ್ನು ಗುರಿಯಾಗಿರಿಸಿಕೊಳ್ಳಲು ಅವಕಾಶ ಕೊಟ್ಟಿದೆ. ಇದರಿಂದ ರಾಜ್ಯದ ಭರವಸೆ ಹಾಗೂ ಒಳ್ಳೆಯ ಉದ್ದೇಶವನ್ನು ಕದಡುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಮಸ್ಯೆಗಳು ಎದುರಾಗುವುದು ಖಚಿತ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಳಪೆ ಗುಣಮಟ್ಟಕ್ಕೆ ಕಾರಣರಾದ ಐಎಎಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಹ ಜಂಟಿ ಸದನ ಸಮಿತಿ ಸರಕಾರಕ್ಕೆ ಸೂಚನೆ ನೀಡಿದೆ. ನಿಲ್ದಾಣದ ಪ್ರತಿಯೊಂದು ಘಟ್ಟದಲ್ಲಿ ಕೈಗೊಡ ನಿರ್ಣಯಗಳು ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳಿಗೆ ಸರಿಯಾಗಿಲ್ಲ. ಈ ನಿರ್ಣಯಗಳೇ ಕಳಪೆ ಗುಣಮಟ್ಟದ ಮೂಲಸೌಲಭ್ಯಕ್ಕೆ ಕಾರಣವಾಗಿದೆ.
ನಿಲ್ದಾಣದ ನಿರ್ಮಾಣದ ಪ್ರತಿಯೊಂದು ಕಾರ್ಯದಲ್ಲಿ ಇನ್ಫೋಸಿಸ್ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ, ಉದ್ಯಮಿ ರಾಜೀವ ಚಂದ್ರಶೇಖರ್, ಬೆಂಗಳೂರು ವಿವಿ ಮಾಜಿ ಕುಲಪತಿ ಪ್ರೊ ಕೆ ಸಿದ್ದಪ್ಪ ಹಾಗೂ ಐಎಎಸ್ ಅಧಿಕಾರಿಗಳಾದ ವಿ ಪಿ ಬಳಿಗಾರ್, ಅಗರವಾಲ್, ಸುಭೀರ್ ಸಿಂಗ್, ವಿನಯ್ ಕುಮಾರ್, ಕೆ ಜಯರಾಜ್, ಬಿ ಕೆ ದಾಸ್, ಕೃಷ್ಣಕುಮಾರ್, ಸಿ ಕೆ ನೀಲಕಂಠರಾಜ್, ಎಸ್ ಗೋಪಾಲರೆಡ್ಡಿ, ಬಿ ಎಸ್ ಪಾಟೀಲ್, ಕೇದಾರ ಸುನೀಲ್ ಅರೋರಾ, ಕೆ ರಾಮಲಿಂಗಂ, ಜಯಕೃಷ್ಣನ್ ಸಿಂಗ್, ಬಿ ಕೆ ಬ್ರಹ್ಮ, ಬಿ ವಿ ಗುಪ್ತಾ, ಸತೇಂದ್ರ ಸಿಂಗ್, ಎನ್ ವಿಶ್ವನಾಥ್, ಬಾಲಸುಬ್ರಮಣ್ಯ ಅವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸುವಂತೆ ಸಮಿತಿ ಶಿಪಾರಸ್ಸು ಮಾಡಿದೆ. ಡಾ ಹೇಮಚಂದ್ರಸಾಗರ್ ನೇತೃತ್ವದ 21 ಮಂದಿ ಸದಸ್ಯರ ಜಂಟಿ ಸದನ ಸಮಿತಿ ಸಮಗ್ರ ಪರಿಶೀಲನೆ ನಡೆಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ.
ವಿಮಾನ ನಿಲ್ದಾಣ ಆರಂಭವಾದಾಗ ಅದಕ್ಕೆ ಹೆಸರೇನಿಡಬೇಕು ಎಂಬ ಬಗ್ಗೆ ಭಾರೀ ಚರ್ಚೆಗಳಾಗಿದ್ದವು. ಬಸವಣ್ಣ, ಸರ್ ಎಂ ವಿಶ್ವೇಶ್ವರಯ್ಯ, ಕುವೆಂಪು, ಅಂಬೇಡ್ಕರ್ ಮುಂತಾದ ಹೆಸರುಗಳು ಕೇಳಿಬಂದಿದ್ದವು.