ಬಾರ್ ಗರ್ಲ್ಸ್ ಕಿಡ್ಯಾಪ್, ಮೂವರಿಗೆ ಗುಂಡೇಟು
ಗುಂಡೇಟಿನಿಂದ ಗಾಯಗೊಂಡಿರುವ ಪ್ರಮುಖ ಆರೋಪಿ ವಾಸಿಂ ಖಾನ್(30), ಇನಾಯತ್(25) ಹಾಗೂ ಸೈಯದ್ ಪಾಷ(30) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಕಂದರ್ (27), ಜಾವೇದ್(27) ಹಾಗೂ ಟಿಪ್ಪು(28) ಎಂಬುವವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಕೋರಮಂಗಲ ಠಾಣೆ ಇನ್ಸ್ ಪೆಕ್ಟರ್ ಜಿ ನಾಗರಾಜ್ ಮಡಿವಾಳ ಠಾಣೆ ಪೇದೆಗಳಾದ ಹರೀಶ್ ಹಾಗೂ ಫಕ್ರುದ್ದೀನ್ ಎಂಬುವವರು ಗಾಯಗೊಂಡಿದ್ದಾರೆ.
ಕೋರಮಂಗಲ 6ನೇ ಬ್ಲಾಕ್ ನಲ್ಲಿರುವ ಅಶೋಕ್ ರೆಸಿಡೆನ್ಸಿಯಲ್ಲಿರುವ ನೈಟ್ಸ್ ಕ್ಲಬ್ ಬಾರ್ ಅಂಡ್ ರೆಸ್ಟೋರೆಂಟ್ ಮಧ್ಯೆ ಸರಬರಾಜು ಮಾಡುವ 12 ಯುವತಿಯನ್ನು ಕೆಲಸ ಮುಗಿದ ಬಳಿಕ ಕ್ವಾಲಿಸ್ ಕಾರ್ ನಲ್ಲಿ ಮನೆಗೆ ಕಳುಹಿಸಲಾಗಿತ್ತು. ಮೂರು ಬೈಕ್ ಗಳಲ್ಲಿ ಹಿಂಬಾಲಿಸಿದ ಆರು ಮಂದಿ ಕೋರಮಂಗಲ 80 ಅಡಿ ರಸ್ತೆಯಲ್ಲಿ ಶನಿವಾರ ರಾತ್ರಿ 11.30 ರ ಸುಮಾರಿಗೆ ಕಾರನ್ನು ಅಡ್ಡಗಟ್ಟಿದರು.
ಚಾಲಕ ನಿತಿನ್ ಮೇಲೆ ಹಲ್ಲೆ ನಡೆಸಿ ಹೊರಗೆ ತಳ್ಳಿ ಯುವತಿಯರ ಸಮೇತ ಕಾರನ್ನು ಅಪಹರಿಸಿದರು. ಚಾಲಕ ತಕ್ಷಣ ಬಾರ್ ಮಾಲೀಕ ಶಿವಪ್ರಸಾದ್ ಶೆಟ್ಟಿ ಎಂಬುವವರಿಗೆ ವಿಷಯ ತಿಳಿಸಿದ. ಆಗ ಶಿವಪ್ರಸಾದ್ ಕೋರಮಂಗಳ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲೇ ಬಾರ್ ಮಾಲೀಕರಿಗೆ ಕರೆ ಮಾಡಿ 4 ಲಕ್ಷ ರುಪಾಯಿ ನೀಡುವಂತೆ ವಾಸಿಂ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.