ಮುಂಬೈ ದಾಳಿ : ಉಲ್ಟಾ ಹೊಡೆದ ಕಸಬ್
ಆತನ ವಿರುದ್ಧ ಸಲ್ಲಿಸಲಾಗಿದ್ದ ಎಲ್ಲ ಆರೋಪಗಳನ್ನೂ ಕಸಬ್ ತಳ್ಳಿಹಾಕಿದ್ದು, ಪೊಲೀಸರ ಬಲವಂತದಿಂದ ಮತ್ತು ತೀವ್ರ ಒತ್ತಡದಲ್ಲಿ ಹಿಂದಿನ ಹೇಳಿಕೆ ನೀಡಿದ್ದಾಗಿ ವಿಶೇಷ ವಿಚಾರಣಾ ನ್ಯಾಯಾಲಯಕ್ಕೆ ಹೇಳಿದ್ದಾನೆ. ಆತನ ವಿರುದ್ಧ ಭಾರತದ ಮೇಲೆ ಯುದ್ಧ ಸಾರಿದ, ಕೊಲೆ ಮಾಡಿದ, ಕೊಲೆಗೆ ಸಂಚು ರೂಪಿಸಿದ ಮುಂತಾದ ಆರೋಪಗಳನ್ನು ಹೊರಿಸಲಾಗಿದೆ.
ಸರಕಾರಿ ವಕೀಲ ಉಜ್ವಲ್ ನಿಕ್ಕಂ ಅವರು ವಿಚಾರಣೆಯನ್ನು ಡಿಸೆಂಬರ್ 16ರಂದು ಪೂರೈಸಿದ್ದರು. ಇಂದು ಕಸಬ್ ತನ್ನ ವಿರುದ್ಧ ನೀಡಿರುವ ಸಾಕ್ಷ್ಯಗಳಿಗೆ ಪ್ರತಿಯಾಗಿ ಹೇಳಿಕೆ ನೀಡಬೇಕಾಗಿತ್ತು. ಕಳೆದ ಏಳು ತಿಂಗಳಲ್ಲಿ 600ಕ್ಕೂ ಹೆಚ್ಚಿನ ಸಾಕ್ಷಿಗಳು ಕಸಬ್ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ.
ಈ ಮೊದಲು, ಬಂಧನದ ನಂತರ ಪೊಲೀಸರೆದಿರು, ಮ್ಯಾಜಿಸ್ಟ್ಟೇಟರೆದಿರು ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಕಸಬ್ ತನ್ನ ವಿರುದ್ಧ ಮಾಡಿದ್ದ ಆರೋಪಗಳನ್ನು ಒಪ್ಪಿಕೊಂಡಿದ್ದ. ದಾಳಿಗಾಗಿ ಲಷ್ಕರ್-ಇ-ತೊಯ್ಬಾದಿಂದ ತರಬೇತಿ ಪಡೆದಿದ್ದು ಕಸಬ್ ಒಪ್ಪಿಕೊಂಡಿದ್ದ ಮತ್ತು ಲಷ್ಕರ್ ನ ಪ್ರಮುಖ ನಾಯಕರ ಹೆಸರುಗಳನ್ನು ಕೂಡ ನ್ಯಾಯಾಲಯದೆದಿರು ಪ್ರಸ್ತಾಪಿಸಿದ್ದ.