ನಿರಂತರ ಜ್ಯೋತಿ :24 ಗಂಟೆ ವಿದ್ಯುತ್ : ಈಶ್ವರಪ್ಪ
ಅವರು ಬುಧವಾರ ಸಾಗರ ತಾಲ್ಲೂಕು ಬ್ಯಾಕೋಡು ಗ್ರಾಮದಲ್ಲಿ ಮೆಸ್ಕಾಂ ನೂತನ ಶಾಖಾ ಕಛೇರಿ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯುತ್ ಉತ್ಪಾದನೆಗಾಗಿ ಆಸ್ತಿ-ಪಾಸ್ತಿ, ಮನೆಮಠಗಳನ್ನು ತ್ಯಾಗಮಾಡಿದ ಜಿಲ್ಲೆ ಹಾಗೂ ಕೆಲವೊಂದು ಭಾಗಗಳಲ್ಲಿ ನಿರಾಶ್ರಿತರಾಗಿ ಸ್ಥಳಾಂತರಗೊಂಡಿರುವ ಪ್ರದೇಶಗಳಲ್ಲಿ ನಿರಂತರ ಜ್ಯೋತಿ ಯೋಜನೆಯನ್ನು ಆದ್ಯತೆ ಮೇಲೆ ಅನುಷ್ಠಾನಕ್ಕೆ ತರುವ ಚಿಂತನೆ ನಡೆದಿದೆ. ಚುನಾಯಿತ ಪ್ರತಿನಿಧಿಗಳ ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು ನಿರಂತರವಾಗಿ ವಿದ್ಯುತ್ ಒದಗಿಸುವ ತೀರ್ಮಾನ ಕೈಗೊಳ್ಳಲಾಗುವುದೆಂದು ಹೇಳಿದರು.
ವಿದ್ಯುತ್ ಉತ್ಪಾದನೆ ಸ್ವಾಲಂಬನೆ: ಬ್ಯಾಕೋಡಿನ ಭಾಗದಲ್ಲಿ ವಿದ್ಯುತ್ ಪ್ರಸರಣ ಘಟಕ ಆರಂಭಕ್ಕೆ 8 ಕೋಟಿ ರೂ. ಮಂಜೂರು ಮಾಡಿದ್ದು, ಎರಡು ತಿಂಗಳೊಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದೆಂದು ಹೇಳಿದರು. ರಾಜ್ಯದಲ್ಲಿನ ವಿದ್ಯುತ್ ಕೊರತೆಯನ್ನು ನಿವಾರಿಸಲು ಸರ್ಕಾರದ ಅಧಿಕಾರಾವಧಿಯಲ್ಲಿ ಪ್ರತಿವರ್ಷ 1200 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮೂಲಕ ಸ್ವಾವಲಂಭಿ ರಾಜ್ಯವನ್ನಾಗಿಸುವುದಾಗಿ ತಿಳಿಸಿದರು. ವಿದ್ಯುತ್ ಉತ್ಪಾದನೆ ಆದ್ಯತೆ ನೀಡಿದಂತೆ ವಿತರಣೆಯಲ್ಲಿಯೂ ಸುಧಾರಣೆ ತರುವ ದೃಷ್ಠಿಯಿಂದ 1500 ಇಂಜಿನಿಯರ್ಗಳನ್ನು ಮೆರಿಟ್ ಆಧಾರದ ಮೇಲೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ 3900 ಲೈನ್ಮನ್ಗಳನ್ನು ನೇಮಕ ಮಾಡಿಕೊಳ್ಳಲಾಗುವುದೆಂದು ಹೇಳಿದರಲ್ಲದೆ, ವಿದ್ಯುತ್ ಕಳ್ಳತನ ತಡೆಗೆ ಬಿಗಿ ವ್ಯವಸ್ಥೆ ತರಲಾಗುವುದೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮಾತನಾಡಿ, ಬ್ಯಾಕೋಡು ಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ ಮುಂತಾದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ವಿಶೇಷವಾಗಿ 4.50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಗುತ್ತಿಗೆದಾರರು ಮುಂದೆ ಬರುತ್ತಿಲ್ಲವಾದ್ದರಿಂದ ವಿಳಂಬವಾಗಿದೆ. ಈಗ ಒಂದಿಬ್ಬರು ಮುಂದೆ ಬಂದಿದ್ದು, ಶೀಘ್ರ ವಾಗಿ ಕಾಮಗಾರಿಗಳು ಆರಂಭವಾಗಲಿವೆ ಎಂದರಲ್ಲದೆ, ಪ್ರೌಢಶಾಲೆಗಳಿಗಾಗಿ 24 ಲಕ್ಷ ರೂ. ಬಿಡುಗಡೆ, ಅಗತ್ಯವಿರುವ ಎಲ್ಲಾ ಗ್ರಾಮಗಳಿಗೆ ಕಾಲಸಂಕಗಳ ನಿರ್ಮಾಣ, ರಾಜೀವ್ಗಾಂಧಿ ವಿದ್ಯುದ್ಧೀಕರಣ ಯೋಜನೆಯಡಿ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದೆಂದು ಹೇಳಿದರು.
(ದಟ್ಸ್ ಕನ್ನಡವಾರ್ತೆ)