ಬಿಜೆಪಿ ಭಿನ್ನರ ಬೇಡಿಕೆ ಪಟ್ಟಿಯಲ್ಲೇನಿದೆ?
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಭಿನ್ನಮತೀಯರು ಸಿಎಂ ಯಡಿಯೂರಪ್ಪ ಅವರಿಗೆ ಬೇಡಿಕೆ ಪತ್ರವನ್ನು ಮಂಗಳವಾರ ಸಲ್ಲಿಸಿದ್ದರು. ಅದರಲ್ಲಿ ಕನಿಷ್ಠ ಮೂವರಿಗೆ ಸಚಿವ ಸ್ಥಾನ, ಹಾಲಿ ಸಚಿವರ ಖಾತೆ ಬದಲಾವಣೆ, ನಿಗಮ ಮಂಡಳಿಗಳಿಗೆ ಮರುನೇಮಕ ಮುಂತಾದವು ಪ್ರಮುಖವಾಗಿದ್ದವು ಎನ್ನಲಾಗಿದೆ. ಗಣಿ ಧಣಿಗಳು ಸಿಬಿಐ ದಾಳಿಯಿಂದ ತಣ್ಣಾಗಾಗಿರುವ ಹಿನ್ನೆಲೆಯಲ್ಲಿ, ಬಂಡಾಯದ ಮುಂದಾಳತ್ವದ ಹೊಣೆ ರೇಣುಕಾಚಾರ್ಯ ಆವರಿಗೆ ಸಿಕ್ಕಿದೆ. ಆದರೂ, ಭಿನ್ನಮತೀಯರ ಬೇಡಿಕೆ ಪಟ್ಟಿಯನ್ನು ರೆಡ್ಡಿ ಸಹೋದರರ ಸಮ್ಮುಖದಲ್ಲೇ ತಯಾರಿಸಲಾಗಿದೆ ಎಂಬ ಸುದ್ದಿಯೂ ಹರಡಿದೆ.
ಈ ನಡುವೆ ಸಿಎಂ ಬಳಗ ಆರ್ ಅಶೋಕ್, ಕಟ್ಟಾಸುಬ್ರಮಣ್ಯ ನಾಯ್ಡು ಅವರು ಕೋಪಗೊಂಡ ಬಂಡಾಯಗಾರರನ್ನು ತಣ್ಣಗಾಗಿಸಲು ಹರ ಸಾಹಸ ಪಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಭಿನ್ನಮತೀಯರು ಬೇಡಿಕೆ ಪಟ್ಟಿ ಸಹಿತ ಆಂತರಿಕ ಬಿಕ್ಕಟ್ಟನ್ನು ಬಹಿರಂಗಗೊಳಿಸಿ ಪತ್ರಿಕಾಗೋಷ್ಠಿ ಕರೆಯುವ ಸಾಧ್ಯತೆಯಿದೆ. ಇದಲ್ಲದೆ ಡಿ.21 ರಂದು ಆರಂಭವಾಗುವ ಅಧಿವೇಶನವನ್ನು ಬಹಿಷ್ಕರಿಸಲು ಭಿನ್ನರ ಬಣ ನಿರ್ಧರಿಸಿದಂತಿದೆ. ಇದೆಲ್ಲದರ ಮಧ್ಯೆ, ಸಿಎಂ ಯಡಿಯೂರಪ್ಪ, ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್ ಸೇರಿದಂತೆ ಹಿರಿಯ ನಾಯಕರು ಆಗಾಗ್ಗೆ ಮಾಧ್ಯಮದ ಮುಂದೆ 'ಬಿಜೆಪಿಯಲ್ಲಿ ಭಿನ್ನಮತವಿಲ್ಲ, ಎಲ್ಲರೂ ಒಗ್ಗಟ್ಟಿನಿಂದ ಕೆಲಸಮಾಡುತ್ತಿದ್ದೇವೆ. ರೆಸಾರ್ಟ್ ಸಂಸ್ಕೃತಿ ತಪ್ಪಲ್ಲ' ಎಂಬ ಹಲಬುತ್ತಿದ್ದಾರೆ.
(ಏಜೆನ್ಸೀಸ್)