ತುಂಗಾನದಿಯಲ್ಲಿ ಮಾನಸಿಕ ಅಸ್ವಸ್ಥ ಬಾಲಕಿ
ಬೆಳಗಿನ ಜಾವ ತುಂಗಾನದಿಯಲ್ಲಿ ಬಾಲಕಿಯ ತಲೆ ಮಾತ್ರ ಕಾಣುತ್ತಿದ್ದರಿಂದ ನದಿಯಲ್ಲಿ ಹೆಣ ತೇಲುತ್ತಿದೆ ಎಂದು ಭಾವಿಸಿದ ಸಾರ್ವಜನಿಕರು ಕೂಡಲೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಹಳೆ ಸೇತುವೆ ಕೆಳಗೆ ಮೇರಿ ಇಮ್ಯಾಕ್ಯುಲೇಟ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾ (14) ತಪಸ್ಸು ಮಾಡುತ್ತಿರುವವಳಂತೆ ನೀರಿನಲ್ಲಿ ಕುತ್ತಿಗೆಯವರೆಗೆ ದೇಹವನ್ನು ಮುಳುಗಿಸಿ ಕುಳಿತಿದ್ದಳು. ಸುದ್ದಿ ಒಬ್ಬರಿಂದೊಬ್ಬರಿಗೆ ಹಬ್ಬಿ ನೂರಾರು ಜನ ಅಲ್ಲಿ ಜಮಾಯಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಕೋಟೆ ಠಾಣೆಯ ಪೊಲೀಸರು ನೀರಿನಲ್ಲಿ ಕುತ್ತಿಗೆಯವರೆಗು ಮುಳುಗಿ ಕುಳಿತಿದ್ದ ಬಾಲಕಿಯನ್ನು ಸಾರ್ವಜನಿಕರ ಸಹಕಾರದೊಂದಿಗೆ ದಡಕ್ಕೆ ಎಳೆದು ತಂದರು. ಸಾಕಷ್ಟು ಗಾಬರಿಗೊಂಡಿದ್ದ ಬಾಲಕಿ ವಿದ್ಯಾಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆದೊಯ್ದರು.
ಬಾಲಕಿ ವಿದ್ಯಾ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕೃಷ್ಣ ಗ್ಯಾರೇಜ್ ಬಳಿಯಲ್ಲಿ ವಾಸವಾಗಿರುವ ಶ್ರೀನಿವಾಸ್ ಎಂಬುವವರ ಮಗಳಾಗಿದ್ದಾಳೆ. ಪೋಷಕರು ತಿರುಪತಿಗೆ ಹೋದ ನಂತರ ವಿದ್ಯಾ ಮಾನಸಿಕವಾಗಿ ಖಿನ್ನಳಾಗಿ ತುಂಗಾನದಿಗೆ ಬಂದು, ಕುತ್ತಿಗೆವರೆಗಿನ ನೀರಿನಲ್ಲಿ ಕುಳಿತು ಕಣ್ಣು ಮುಚ್ಚಿದ್ದೆ ಸಾರ್ವಜನಿಕರಿಗೆ ಹೆಣ ಕಂಡಂತಾಗಿತ್ತು.