ರೆಡ್ಡಿಗಳು 'ಕೈ' ತಟ್ಟಿದ್ರು, ದೇಶಪಾಂಡೆ ಪಟಾಕಿ
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಬಿಕ್ಕಟ್ಟು ಉಂಟಾಗಿ ಶಾಸಕರುಗಳು ರೆಸಾರ್ಟ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾಯಿಸುವ ನಿಟ್ಟಿನಲ್ಲಿ ರೆಡ್ಡಿ ಸಹೋದರರು ಕಾಂಗ್ರೆಸ್ ಬಾಗಿಲು ತಟ್ಟಿ ಬೆಂಬಲಕ್ಕೆ ಯತ್ನ ನಡೆಸಿದರು. ಆದರೆ, ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸೊಪ್ಪು ಹಾಕಲಿಲ್ಲ ಎಂದರು.
ರೆಡ್ಡಿ ಸಹೋದರರು ಎಲ್ಲಿ ಯಾರನ್ನು ಸಂಪರ್ಕಿಸಿದರು ಎಂದು ಹೇಳಲು ನಿರಾಕರಿಸಿದ ಅವರು, ಒಟ್ಟಿನಲ್ಲಿ ಕಾಂಗ್ರೆಸ್ ಕದ ತಟ್ಟಿದ್ದಂತೂ ಸ್ಪಷ್ಟ. ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ 122 ಶಾಸಕರ ಬೆಂಬಲವಿದ್ದರೂ ಅಸ್ಥಿರ ಸರಕಾರವಾಗಿದೆ. ಯಾವ ಸಂದರ್ಭದಲ್ಲಿ ಸರಕಾರ ಪತನವಾಗಬಹುದು. ರೆಡ್ಡಿಗಳಿಂದ ಈ ಸರಕಾರಕ್ಕೆ ಆತಂಕವಂತೂ ಖಂಡಿತಾ ಇದೆ. ಇದರ ಆಯುಷ್ಯ ಬಲು ಕಮ್ಮಿ ಎಂದು ದೇಶಪಾಂಡೆ ಭವಿಷ್ಯ ನುಡಿದರು.
ಅತ್ತ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ದೇಶಪಾಂಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅನ್ಯ ಪಕ್ಷಗಳ ಬಾಗಿಲು ತಟ್ಟುವ ಸಂಸ್ಕೃತಿ ಅವರದೇ ಹೊರತು ನಮ್ಮದಲ್ಲ. ದೇಶಪಾಂಡೆ ಅವರಿಗೇನಾದರೂ ನಾಚಿಕೆ ಇದೆಯಾ? ಜನತಾಪಕ್ಷ, ಲೋಕಶಕ್ತಿ, ಸಂಯುಕ್ತ ಜನತಾದಳ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಹೀಗಾಗಿ ನಾನು ಕೂಡಾ ಕಾಂಗ್ರೆಸ್ ಕದ ತಟ್ಟಿರುವ ಕನಸು ಬಿದ್ದಿರಬಹುದು ಎಂದು ವ್ಯಂಗ್ಯವಾಡಿದರು. ನಮ್ಮ ರಾಜಕೀಯ ಜೀವನ ಅಂತ್ಯವಾಗುವುದಾದರೆ ಅದು ಬಿಜೆಪಿಯಲ್ಲೇ ಮಾತ್ರ ಎಂದು ಜನಾರ್ದನರೆಡ್ಡಿ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)