ತೆಲಂಗಾಣ ವಿವಾದ: ರೋಸಯ್ಯ ರಾಜೀನಾಮೆ?
ತೆಲಂಗಾಣ ಪ್ರತ್ಯೇಕ ರಾಜ್ಯ ವಿರೋಧಿಸಿ ಎನ್ ಟಿ ರಾಮರಾವ್ ಪತ್ನಿ ಲಕ್ಷ್ಮಿ ಪಾರ್ವತಿ ಅವರು ಎನ್ ಟಿಆರ್ ಸಮಾಧಿ ಬಳಿ ನಿರಶನ ಆರಂಭಿಸಿದ್ದಾರೆ. ಕಾಂಗ್ರೆಸ್ ಸಂಸದರು ಸೇರಿದಂತೆ ಪ್ರತಿಪಕ್ಷಗಳ ಶಾಸಕರ, ಸಂಸದರು, ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಂಪುಟದ 20 ಸಚಿವರು ರಾಜೀನಾಮೆ ನೀಡಿದ್ದರಿಂದ ಸರಕಾರ ಇಕ್ಕಟ್ಟಿಗೆ ಸಿಲುಕಿದ್ದು, ಮುಖ್ಯಮಂತ್ರಿ ಕೆ ರೋಸಯ್ಯ ಅವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಹಾಗೂ ರೋಸಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಸತತ ಸಂಪರ್ಕ ಹೊಂದಿದ್ದಾರೆ. ಆದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಸಾಧ್ಯತೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ವೈ ಎಸ್ ರಾಜಶೇಖರರೆಡ್ಡಿ ನಿಧನದ ನಂತರ ಮುಖ್ಯಮಂತ್ರಿಯಾಗಿ 100 ದಿನ ಪೂರೈಸಿರುವ ಕೆ ರೋಸಯ್ಯ ದೊಡ್ಡ ಗಂಡಾಂತರಕ್ಕೆ ಸಿಲುಕಿದ್ದಾರೆ. ಸಂಪುಟದ 34 ಮಂದಿಯಲ್ಲಿ ರಾಯಲಸೀಮಾ ಮತ್ತು ಕೋಸ್ಟಲ್ ಆಂಧ್ರಕ್ಕೆ ಸೇರಿದ 20 ಮಂದಿ ಸಚಿವರು ರಾಜೀನಾಮೆ ನೀಡಿದ್ದು, ಸರಕಾರಕ್ಕೆ ದೊಡ್ಡ ತಲೆನೋವಾಗಿದೆ. ಉಳಿದ ಮಂದಿ ತೆಲಂಗಾಣ ಪ್ರಾಂತ್ಯಕ್ಕೆ ಸೇರಿದವರಾಗಿದ್ದು, ಸರಕಾರ ನಡೆಸಲು ಅಸಾಧ್ಯ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗಾಗಿ ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
(ಏಜನ್ಸೀಸ್)