ತೆಲಂಗಾಣ: 20 ಸಚಿವರು ರಾಜೀನಾಮೆ ನಿರ್ಧಾರ
ಅಖಂಡ ಅಂಧ್ರಪ್ರದೇಶವನ್ನು ಯಾವ ಕಾರಣಕ್ಕೂ ಇಬ್ಭಾಗ ಮಾಡಬಾರದು. ಪ್ರತ್ಯೇಕ ತೆಲಂಗಾಣಕ್ಕೆ ಸಮ್ಮತಿಸಿರುವ ಕೇಂದ್ರ ಸರಕಾರ ಕೂಡಲೇ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ಇಂದು ಹೈದರಾಬಾದ್ ನ ಹೋಟೆಲ್ ವೊಂದರಲ್ಲಿ ಸಭೆ ಸೇರಿದ ರಾಯಲಸೀಮಾ ಮತ್ತು ಕೋಸ್ಟಲ್ ಆಂಧ್ರದ ಸಚಿವರು, ತೆಲಂಗಾಣ ಪ್ರತ್ಯೇಕವಾಗಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಇದಕ್ಕೆ ವಿರುದ್ಧವಾಗಿ ಕೇಂದ್ರ ಸರಕಾರ ಇಬ್ಭಾಗ ಮಾಡಲು ಮುಂದಾದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕೆ ರೋಸಯ್ಯ ಅವರಿಗೆ ತಮ್ಮ ನಿರ್ಧಾರ ತಿಳಿಸಿರುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.
ಆಂಧ್ರದಾದ್ಯಂತ ತೆಲಂಗಾಣಕ್ಕೆ ಭಾರಿ ಪ್ರತಿಭಟನೆ ಎದುರಾಗಿದ್ದರಿಂದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ತೆಲಂಗಾಣ ರಾಜ್ಯ ತಕ್ಷಣವೇ ಆಗುವ ಮಾತಲ್ಲ, ಇದಕ್ಕೆ ಕಾಲಾವಕಾಶಬೇಕು ಎಂಬ ಹೇಳಿಕೆ ನೀಡಿ ಪ್ರತಿಭಟನೆ ತಣ್ಣಗೆ ಮಾಡಲು ಯತ್ನಿಸಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿ ರೋಸಯ್ಯ ಕೂಡ ತೆಲಂಗಾಣ ರಾಜ್ಯವಾಗಲು ಇನ್ನೂ ಎರಡು ವರ್ಷಗಳಾದರೂ ಬೇಕು. ಇದಕ್ಕೆ ತಮ್ಮದೇ ಆದ ಕಾನೂನು ಕ್ರಮಗಳಿವೆ. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
(ಏಜನ್ಸೀಸ್)