ನೈಸ್ ವಿರುದ್ಧ ಉಗ್ರ ಹೋರಾಟ, ದೇವೇಗೌಡ
ಭೂಸ್ವಾಧಿನ ವಿರೋಧಿ ವೇದಿಕೆ ಹಮ್ಮಿಕೊಂಡಿದ್ದ ಜನತಾ ನ್ಯಾಯಾಲಯದಲ್ಲಿ ಮಾತನಾಡುತ್ತಿದ್ದ ಗೌಡರು, ನೈಸ್ ನಲ್ಲಿ ಹೇಗೆ ಅಕ್ರಮಗಳಾಗಿವೆ ಎಂಬುದನ್ನು ಎಳೆಎಳೆಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬಿಡಿಸಿಟ್ಟರು. ಇದೊಂದು 50 ಸಾವಿರ ಕೋಟಿ ರುಪಾಯಿಗಳ ಅಕ್ರಮವಾಗಿದೆ. ನೈಸ್ ಕಂಪನಿಗೆ ಹೆಚ್ಚುವರಿ ಜಮೀನು ನೀಡಲಾಗಿದೆ. ಸರಕಾರ ಜನರಿಗೆ ಸಾಕಷ್ಟು ಅನ್ಯಾಯ ಮಾಡಿದೆ. ಇದಕ್ಕಾಗಿ ಬೀದಿಗಿಳಿದು ಹೋರಾಟ ನಡೆಸುವುದಾಗಿ ಹೇಳಿದರು.
ಸಾಕ್ಷಿ ಕಟಕಟೆಯಲ್ಲಿ ನಿಂತು ತಮ್ಮ ಅಹವಾಲು ತೋಡಿಕೊಂಡ ರೈತಾಪಿ ವರ್ಗ, ಸರಕಾರ ತಮ್ಮ ನೆರವಿಗೆ ಧಾವಿಸದೇ ಹೋದರೆ ಹೋರಾಟ ಅನಿವಾರ್ಯ ಎಂದು ಪ್ರತಿಪಾದಿಸಿತು. ನೈಸ್ ಸಂಸ್ಥೆ ತನ್ನ ರಸ್ತೆಯ ಎರಡು ಕಿಮೀ ಆಚೆ ಈಚೆ ಭೂಮಿ ಸ್ವಾಧಿನ ಮಾಡಿಕೊಳ್ಳಲು ಹೊರಟಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳ ಪಡೆಯನ್ನಿಟ್ಟುಕೊಂಡು ಬೆದರಿಸುತ್ತಿದೆ ಎಂದು ರೈತರು ಆರೋಪಿಸಿದರು.
ವೇದಿಕೆಯ ಕಾರ್ಯದರ್ಶಿ ರಘುನಾಥ್ ಅವರು ನೈಸ್ ರಸ್ತೆಗೆ 20,193 ಎಕರೆ ಭೂಮಿ ಸಾಕು, ಆದರೆ, ಅದು 1,75,275 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. ಈ ಸರಕಾರವೂ ಸಹಕಾರ ನೀಡುತ್ತಿದೆ ಎಂದು ದೂರಿದರು.
(ದಟ್ಸ್ ಕನ್ನಡ ವಾರ್ತೆ)