ಉಳಿಸ ಬನ್ನಿ ಮೂಡಲಪಾಯ ಯಕ್ಷಗಾನ
ನಮ್ಮ ನಾಡಿನ ಸಾಂಸ್ಕೃತಿಕ ಲೋಕ ಶತಮಾನಗಳ ಹಿಂದೆ ರೂಪುಗೊಂಡಿರುವ ಸಾಂಸ್ಕೃತಿಕ ಶೋಧವನ್ನ ಕಳೆದುಕೊಳ್ಳುವಂತಹ ಸ್ಥಿತಿ ಇದೆ. ಆದ್ದರಿಂದ ಸಾಂಸ್ಕೃತಿಕ ರಾಯಭಾರಿಯೆನಿಸಿರುವ ರಾಮನಗರದ ಜಾನಪದ ಲೋಕ ಪ್ರಾಚೀನ ಕಲಾಪ್ರಕಾರವಾದ ಮೂಡಲಪಾಯ ಯಕ್ಷಗಾನದ ಪ್ರಾತ್ಯಕ್ಷಿಕೆ ಶಿಬಿರವನ್ನ ಆಯೋಜಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಿ ಮುಂದಿನ ಪೀಳಿಗೆಗೂ ಅಮೂಲ್ಯ ಕಲಾಪ್ರಕಾರವನ್ನ ಉಳಿಸುವ ಪ್ರಯತ್ನ ಮಾಡುತ್ತಿದೆ.
ಕನ್ನಡ ನಾಡಿನ ಅಮೂಲ್ಯ ಜಾನಪದ ಕಲೆಗಳಿಂದ ಸಾಂಸ್ಕೃತಿಕ ರಂಗ ತನ್ನ ವೈಭವವನ್ನ ಉಳಿಸಿಕೊಂಡುಬಂದಿದೆ. ಆದರೆ ಕೆಲವೊಂದು ಕಲಾಪ್ರಾಕಾರಗಳಿಗೆ ಪ್ರೋತ್ಸಾಹವಿಲ್ಲದೇ ಅವಸಾನದ ಅಂಚಿನಲ್ಲಿವೆ. ಸಂಗೀತ, ಕುಣಿತ, ಅಲಂಕರಣ, ಸಾಹಿತ್ಯ, ವೇಷಭೂಷಣಗಳ ಸಮ್ಮಿಳಿತವಾಗಿರುವ ತಾತ ಮುತ್ತಾತನ ಕಾಲದ ಮೂಡಲಪಾಯ ಯಕ್ಷಗಾನ ಕಲಾಪ್ರಾಕಾರವೂ ಪ್ರೋತ್ಸಾಹವಿಲ್ಲದೇ ಸೊರಗುತ್ತಿದೆ.
ಹಿಂದೆಲ್ಲ ಹಳ್ಳಿಗಾಡಿನ ಪ್ರದೇಶದಲ್ಲಿ ವಿಧ್ಯಾವಂತರಲ್ಲದವರೆಲ್ಲರೂ ಸೇರಿ ಮೂಡಲಪಾಯ ಯಕ್ಷಗಾನ ಕಲೆಯನ್ನ ಉಳಿಸಿಕೊಂಡು ಬಂದಿದ್ದರು. ಆದರೆ ಕಾಲಘಟ್ಟದಲ್ಲಿ ಯಕ್ಷಗಾನ ಮಾದರಿಯ ಮೂಡಲಪಾಯ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗದಿದ್ದರಿಂದ ಮರೆತುಹೋಗುವ ಹಂತ ತಲುಪಿದೆ. ಕರಾವಳಿ ಪ್ರದೇಶದಲ್ಲಿ ಯಕ್ಷಗಾನವನ್ನೇ ಬದುಕಾಗಿಸಿಕೊಂಡು ಯಕ್ಷಗಾನ ಕಲೆಯನ್ನೇ ಆರಾಧಿಸುತ್ತಿರುವುದರಿಂದ ಕರಾವಳಿ ಯಕ್ಷಗಾನ ಇಂದು ವಿಶ್ವವಿಖ್ಯಾತಿಗೊಂಡಿದೆ.
ಆದರೆ ಮೂಡಲಪಾಯ ಕಲಾಪ್ರಾಕಾರ ಮಾತ್ರ ಸೊರಗುತ್ತಿದೆ. ಆದ್ದರಿಂದ ಅಮೂಲ್ಯವಾದ ಸಾಂಸ್ಕೃತಿಕ ಸಂಪತ್ತು ಎನಿಸಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನ ಉಳಿಸುವ ನಿಟ್ಟಿನಲ್ಲಿ ಕೆ.ಎಲ್.ನಾಗೇಗೌಡರ ನಿರ್ಮಾಣದ ಜಾನಪದಲೋಕ ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರಿಗೆ ತರಬೇತಿಯನ್ನು ನೀಡಿ ಕಲೆಯನ್ನ ಉಳಿಸುವ ನಿಟ್ಟಿನಲ್ಲಿ ಶಿಬಿರಗಳನ್ನ ಆಯೋಜಿಸಲಾಗುತ್ತಿದೆ ಎಂದು ಜಾನಪದ ಪರಿಷತ್ನ ಕಾರ್ಯದರ್ಶಿ ಚಕ್ಕೆರೆ ಶಿವಶಂಕರ್ ಹೇಳಿದರು.
ಶತಮಾನಗಳ ಹಿಂದೆ ರೂಪುಗೊಂಡಿರುವ ಅಮೂಲ್ಯವಾದ ಜಾನಪದ ಸಂಪತ್ತು ಎನಿಸಿರುವ ಮೂಡಲಪಾಯ ಯಕ್ಷಗಾನದಲ್ಲಿ ಪುರಾಣಕಾಲದ ವ್ಯಕ್ತಿಗಳ ಪಾತ್ರಗಳಿಗೆ ಜೀವಂತಿಕೆ ತುಂಬುವ ಕಲೆಯಾಗಿದೆ. ಇಂತಹ ಒಂದು ಅಪರೂಪದ ಸಾಂಸ್ಕೃತಿಕ ಶೋಧ ಕಳೆದುಹೋದರೆ ವೈಜ್ಞಾನಿಕ ಶೋಧವೊಂದು ಕಳೆದುಹೋದರೆ ಸಮಾಜಕ್ಕಾಗುವ ನಷ್ಟದ ರೀತಿ ಸಾಂಸ್ಕೃತಿಕ ಲೋಕಕ್ಕೂ ಆಗುತ್ತದೆ. ಆದ್ದರಿಂದ ರಾಜ್ಯದಲ್ಲಿ 14 ಜಿಲ್ಲೆಗಳಲ್ಲಿ ಪ್ರವರ್ಧಮಾನದಲ್ಲಿದ್ದ ಮೂಡಲಪಾಯ ಯಕ್ಷಗಾನ ಕಲೆಯನ್ನ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಜಾನಪದ ಲೋಕ ಮಾಡುತ್ತಿರುವ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ ಎಂಬುದು ಜಾನಪದ ತಜ್ಞ ಈ.ಶಿ.ರಾಮಚಂದ್ರೇಗೌಡರ ಅಭಿಪ್ರಾಯವಾಗಿದೆ.
ಸರ್ಕಾರಿ ನೌಕರರು ಶಿಕ್ಷಕರುಗಳು ಕೂಡ ಮೂಡಲಪಾಯ ಯಕ್ಷಗಾನ ಕಲೆಯಲ್ಲಿ ಈಗಲೂ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ. ಪ್ರಾಚೀನ ಕಾಲದ ಒಂದು ಸಾಂಸ್ಕೃತಿಕ ಶೋಧವನ್ನ ಮುಂದಿನ ಪೀಳಿಗೆಗೂ ಉಳಿಸಿ ಸಾಂಸ್ಕೃತಿಕ ಲೋಕದ ವೈಭವವನ್ನ ಉಳಿಸುವ ನಿಟ್ಟಿನಲ್ಲಿ ಸಮರ್ಪಣಾ ಮನೋಭಾವದಿಂದ ಕಲೆಯನ್ನೇ ಆರಾಧಿಸುತ್ತಿದ್ದಾರೆ.
ಇಂತಹ ವಿಶಿಷ್ಟವಾದ ಕಲಾಪ್ರಾಕಾರವಾದ ಮೂಡಲಪಾಯದ ಕಲಾವಿದರುಗಳು ಸ್ವತಃ ತಾವೇ ಖರ್ಚು ಮಾಡಿಕೊಂಡು ಯಾವುದೇ ಸಂಭಾವನೆ ಪಡೆಯದೇ ಮೂಡಲಪಾಯವನ್ನ ಜೀವಂತವಾಗಿ ಉಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸಿನೆಮಾಗಳ ಪ್ರಭಾವದ ನಡುವೆ ಸೊರಗುತ್ತಿರುವ ನಾಡಿನ ಮೂಡಲಪಾಯ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ ಉಳಿಸುವ ಕಾರ್ಯವನ್ನ ಅನೇಕ ಮಂದಿ ಮಾಡುತ್ತಿದ್ದಾರೆ.
ನಾಡಿನ ಸಾಂಸ್ಕೃತಿಕ ರಾಯಭಾರಿ ಎನಿಸಿರುವ ಜಾನಪದಲೋಕ ಸೊರಗುತ್ತಿರುವ ಅನೇಕ ಜಾನಪದ ಮತ್ತು ಸಾಂಸ್ಕೃತಿಕ ಸಂಪತ್ತನ್ನ ಉಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಜಾನಪದ ಲೋಕದೊಂದಿಗೆ ಕೈಜೋಡಿಸಿದರೆ ನಮ್ಮನಾಡಿನ ಸಾಂಸ್ಕೃತಿಕಲೋಕದ ಗತಕಾಲದ ವೈಭವ ಮರುಕಳಿಸಲು ಸಾಧ್ಯವಾಗುತ್ತದೆ.