ಗಣಿಲಾರಿಗಳ ಹಾವಳಿಗೆ ಬಸವಳಿದ ಜನತೆ
ನಗರದ ಯಾವ ರಸ್ತೆಯಲ್ಲಿಯೂ ನೆಟ್ಟಗೆ ಹೋಗಲು ಸಾಧ್ಯವಿಲ್ಲ. ಹೀಗಿದೆ ರಸ್ತೆಗಳ ಗುಣಮಟ್ಟ. ರಸ್ತೆಯಲ್ಲಿ ಸಾಗುವವರು ಧೂಳನ್ನು ಕುಡಿಯುತಾ, ಸುತ್ತಿ ಬಳಸಿ ಓಡಾಡಬೇಕಾಗಿದ್ದು, ವಾಹನ ಸವಾರರಿಗೆ, ಪಾದಚಾರಿಗಳಿಗೆ ಹೆಚ್ಚಿನ ಸಮಸ್ಯೆಯುಂಟಾಗಿದೆ. ಆದರೆ ಇದ್ಯಾವುದು ಜನಪ್ರತಿನಿಧಿಗಳಿಗೆ ಅರ್ಥವಾಗಿಲ್ಲ ಎಂದಲ್ಲಾ. ಯಾಕೋ ಜನತೆಯ ಮೇಲೆ ಸೇಡು ತೀರಿಸಿಕೊಳ್ಳುವಂತಿದೆ ಇವರ ವರ್ತನೆ. ಹೀಗಾಗಿ ನಗರದ ಯಾವ ರಸ್ತೆಯಲ್ಲಿ ಸಾಗಿದರೂ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಬರಹ. ಇಲ್ಲಿವೇ ಗುಂಡಿ-ಗೊಟರುಗಳಿಂದ ತುಂಬಿರುವ ರಸ್ತೆಗಳೇ ಎದುರಾಗುತ್ತದೆ.
ಇದರ ಜೊತೆಗೆ ನಗರದಲ್ಲಿ ಗಣಿ ಲಾರಿಗಳ ಹಾವಳಿ ಹೆಚ್ಚಾಗತೊಡಗಿದ್ದು, ನಗರದ ಮುಖ್ಯ ರಸ್ತೆಗಳಲ್ಲೇ ಯಾರನ್ನು ಲೆಕ್ಕಿಸದೆ ಗಣಿಲಾರಿಗಳು ಓಡಾಡತೊಡಗಿರುವುದು ನಿಜಕ್ಕೂ ಆಶ್ಚರ್ಯ ಉಂಟಾಗಿದೆ. ಏಕೆಂದರೆ ಗಣಿ ಲಾರಿಗಳಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಓಡಾಡಲು ನಿಷೇಧವಿದ್ದರೂ ಕೂಡ ದಿನನಿತ್ಯ ನಿಷೇಧವನ್ನೇ ಉಲ್ಲಂಘಿಸಿ ಓಡಾಡುತ್ತಿರುವುದನ್ನು ನೋಡಿದರೆ ಯಾಕೋ ಸಂಬಂಧಿಸಿದ ಇಲಾಖೆ ಮೇಲೆ ಅನುಮಾನ ಮೂಡುವುದು ಸಹಜ. ಜೊತೆಗೆ ಇಲಾಖೆ ಕಣ್ಣು ಮುಚ್ಚಿಕೊಂಡು ತುಕಡಿಸುತ್ತಿದೆಯೇ ಎಂದೆನಿಸದಿರದು.
ಅದರಲ್ಲೂ ಮುಖ್ಯವಾಗಿ ನಗರ ಬಸ್ ನಿಲ್ದಾಣವಿರುವ ತೀರ್ಥಹಳ್ಳಿ ಸಾಗರ ಮುಖ್ಯ ರಸ್ತೆಯಲ್ಲಿಯೇ ಗಣಿಲಾರಿಗಳು ಯರ್ರಾಬಿರ್ರಿ ಓಡಾಡುತ್ತಿರುವುದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಒಂದು ಕಡೆ ರಸ್ತೆ ಕಾಮಗಾರಿಯಿಂದ ಕಿರಿಕಿರಿ ಉಂಟಾಗುತ್ತಿದ್ದರೆ ಇನ್ನೊಂದು ಕಡೆ ಗಣಿಲಾರಿಗಳ ಹಾವಳಿಯಿಂದ ಸಮಸ್ಯೆ ತಲೆದೋರಿದೆ. ಅದರಲ್ಲೂ ಮುಖ್ಯವಾಗಿ ಬಸ್ಸ್ಟ್ಯಾಂಡ್ ಸುತ್ತಮುತ್ತ ಅತ್ಯಧಿಕ ವಾಹನ ಸಂಚಾರವಿರುವ ಪ್ರದೇಶವಾಗಿದ್ದು, ಗಣಿ ಲಾರಿಗೆ ಈ ಭಾಗದಲ್ಲಿ ಓಡಾಡಲು ಮುಖ್ಯ ಅವಕಾಶ ನೀಡಿರುವುದು ಯಾಕೆ? ಎಂಬುದು ದಾರಿಹೋಕರ ಪ್ರಶ್ನೆ.
ಮೊದಲೇ ನಗರದ ರಸ್ತೆಗಳು ಚಿಂತಾಜನಕ ಸ್ಥಿತಿಯಲ್ಲಿದೆ. ಇದರ ಜೊತೆಗೆ 10-12 ಚಕ್ರದ ಹೆಣಭಾರದ ಗಣಿಲಾರಿಗಳನ್ನು ಓಡಾಡಲು ಬಿಟ್ಟಿರುವುದರಿಂದ ರಸ್ತೆಗಳು ಹಾಳಾಗುವುದಿಲ್ಲವೇ? ಜೊತೆಗೆ ಟ್ರಾಫಿಕ್ ನಿಯಮ ಗಣಿಲಾರಿಗಳಿಗೆ ಇಲ್ಲವೇ? ಎಂಬ ಪ್ರಶ್ನೆ ಎದುರಾದರೂ ಗಣಿಲಾರಿಗಳು ಓಡಾಡಲು ಮುಕ್ತ ಅವಕಾಶ ಮಾಡಿಕೊಟ್ಟಿರುವುದು ಏಕೋ ತಿಳಿಯದಾಗಿದೆ.
ಈ ರೀತಿ ಸಂಚಾರ ಉಲ್ಲಂಘನೆ ಮಾಡಿ ಮುಖ್ಯರಸ್ತೆಗಳಲ್ಲೇ ರೊಯ್ಯಂದು ಸಾಗುವ ಗಣಿಲಾರಿಗಳ ಮೇಲಿನ ಪ್ರೀತಿ ಬಿಟ್ಟು, ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆ ಮುಂದಾಗಬಹುದಲ್ಲ?