ಮಹಿಳಾ ಭಕ್ತರನ್ನು ಬಳಸಿಕೊಂಡ ಪೂಜಾರಿ
ದೈವಶ್ರದ್ಧೆ ಮತ್ತು ದೇವಾಲಯ ಶ್ರದ್ಧೆ ಇರುವವರನ್ನು ಬೆಚ್ಚಿ ಬೀಳಿಸುವ ಘಟನೆ ಇದಾಗಿದೆ. ಇಲ್ಲಿನ ಇತಿಹಾಸ ಪ್ರಸಿದ್ದ ಪೆರುಮಾಳ್ ದೇವಾಲಯದಲ್ಲಿ 36 ವರ್ಷದ ದೇವನಾಥನ್ ಎನ್ನುವ ಅರ್ಚಕ ದೇವಾಲಯದ ಗರ್ಭಗುಡಿಯಲ್ಲೇ ರಾಸಲೀಲೆಯಲ್ಲಿ ತೊಡಗಿ ಅಮಾಯಕ ಮಹಿಳಾ ಭಕ್ತರನ್ನು ಶೋಷಿಸಿದ್ದಾನೆ.
ಎರಡು ಮಕ್ಕಳ ತಂದೆಯಾಗಿರುವ ದೇವನಾಥನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮದರಾಸು ಹೈಕೋರ್ಟ್ ಈತನಿಗೆ ಬೇಲ್ ನೀಡಲು ನಿರಾಕರಿಸಿದೆ. ಈತನ ರಾಸಲೀಲಾ ಪ್ರಕರಣ ಸಾರ್ವಜನಿಕವಾದದ್ದು ಹೇಗೆಂದರೆ, ತಾನು ಒಂದಲ್ಲ ನಾಲ್ಕು ಹೆಂಗಸರುಗಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ತಾನೇ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಟ್ಟಿದ್ದ. ಮೊಬೈಲ್ ಒಂದು ತಿಂಗಳ ಹಿಂದೆ ಕೆಟ್ಟುಹೋದಾಗ ರಿಪೇರಿ ಮಾಡಿಸಲು ಅಂಗಡಿಯಾತನಿಗೆ ಕೊಟ್ಟಾಗ ಚಿತ್ರಗಳು ಕತೆ ಹೇಳಿದವು.
ಒಂದು ರೀತಿಯ ವಿಕೃತ ಕಾಮಿಯೆಂದೆ ತಿಳಿಯಬಹುದಾದ ಈತ ರಾಸಲೀಲೆಗಳಿಗೆ ಉಪಯೋಗಿಸಿದ್ದ ಕಾಂಡೋಂಗಳನ್ನು ಕೂಡ ದೇವಾಲಯದ ಆವರಣದಲ್ಲೇ ಎಸೆದಿದ್ದ. ಈ ವೀಡಿಯೊ ಕ್ಲಿಪ್ ಗಳು ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸೆರೆ ಹಿಡಿದದ್ದು. ಸುಮಾರು 19 ಫೈಲ್ ಮತ್ತು 90 ನಿಮಿಷವಿರುವ ಈ ಕ್ಲಿಪ್ಪಿಂಗ್ಸ್ ಗಳು ಎಂಎಂಎಸ್ ಮತ್ತು ಅಂತರ್ಜಾಲದಲ್ಲಿ ಹಾಯಾಗಿ ತಿರುಗಾಡುತ್ತಿದೆ. ತಮಿಳುನಾಡಿನಲ್ಲಿ ಇವೆಲ್ಲ ದೊಡ್ಡ ಸುದ್ದಿ ಕತೆಯಾಗಿದೆ.
ಹೊರಗಡೆ ಭಕ್ತಾದಿಗಳು ಮಾಚೇಸ ಪೆರುಮಾಳ್ ದೇವರ ದರುಶನಕ್ಕೆ ಕಾದಿದ್ದರೂ ಈತ ಇದನ್ನು ಲೆಕ್ಕಿಸದೆ ತನ್ನ ರಾಸಲೀಲೆ ಮುಂದುವರಿಸುತ್ತಿದ್ದ. ದೇವಾಲಯ ನಗರ ಈತನ ಕೃತ್ಯದಿಂದ ಬೆಚ್ಚಿಬಿದ್ದಿದೆ. ಈಗ ಬೆಳಿಗ್ಗೆ ಅರ್ಧ ತಾಸು ಮತ್ತು ಸಂಜೆ ಅರ್ಧ ತಾಸು ಮಾತ್ರ ಭಕ್ತಾದಿಗಳ ದರುಶನಕ್ಕೆ ದೇವಾಲಯದ ಬಾಗಿಲು ತೆರೆದಿರುತ್ತದೆ. ಮಹಿಳೆಯರು ಈ ದೇವಾಲಯ ಪ್ರವೇಶಿಸದಂತೆ ಕಾಂಚಿಪುರಂ ಪೋಲಿಸ್ ಮುಖ್ಯಸ್ಥರು ಆದೇಶ ಹೊರಡಿಸಿದ್ದಾರೆ. ಪೊಲೀಸರು ಬಂಧಿಸುವ ಮುನ್ನ ಪಿಎಂಕೆ ಪಕ್ಷದ ಮಹಿಳಾ ಕಾರ್ಯಕರ್ತೆಯರು ದೇವಸ್ಥಾನದ ಆವರಣದಲ್ಲಿ ದೇವನಾಥನ್ ಗೆ ಪೊರಕೆ ಮತ್ತು ಚಪ್ಪಲಿ ಸೇವೆ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)