ಮಂಚಾಲಮ್ಮನ ಆಶೀರ್ವಾದ ಪಡೆದ ಸಿಎಂ
ರಾಯಚೂರು, ಡಿ. 3 : ಪ್ರಕೃತಿ ವಿಕೋಪದಿಂದ ತತ್ತರಿಸಿ ಹೋಗಿದ್ದ ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಬಹುಕೋಟಿ ರೂಪಾಯಿಗಳ ವೆಚ್ಚದ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತಿ ಯಡಿಯೂರಪ್ಪ ಬುಧವಾರ ( ಡಿ 2) ವಿದ್ಯುಕ್ತ ಚಾಲನೆ ನೀಡಿದರು.
ರಾಯರ ಮೂಲ ಬೃಂದಾವನ ದರ್ಶನ, ಶ್ರೀಗಳ ಆಶೀರ್ವಾದ ಪಡೆದ ನಂತರ ಮಂತ್ರಾಲಯದ ಗ್ರಾಮ ದೇವತೆ ಮಂಚಾಲಮ್ಮನ ದರ್ಶನ ಪಡೆದರು. ಹೆಲಿಪ್ಯಾಡ್ ನತ್ತ ಹೊರಡಲು ಕಾರು ಹತ್ತಿದ್ದ ಸಿಎಂಗೆ ತಕ್ಷಣ ನೆನಪಾಗಿ ಗಡಿಬಿಡಿಯಲ್ಲಿ ಇಳಿದು ನೇರವಾಗಿ ಮಂಚಾಲಮ್ಮ ಗುಡಿಗೆ ತೆರಳಿ ದರ್ಶನ ಪಡೆದು ನೆಮ್ಮದಿಯ ನಿಟ್ಟುಸಿರುಬಿಟ್ಟರು.
ಕರ್ನಾಟಕ ಸರಕಾರ ಹತ್ತು ಕೋಟಿ ಮತ್ತು ಆಂಧ್ರ ಸರಕಾರ ಐದು ಕೋಟಿ ರೂಪಾಯಿಗಳನ್ನು ವಿವಿಧ ಕಾಮಗಾರಿಗಳಿಗೆ ಬಿಡುಗಡೆ ಮಾಡಿದೆ. ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಫೌಂಡೇಶನ್ ಆರು ಕೋಟಿ ರೂಪಾಯಿ, ಟಿಟಿಡಿ ಮಂಡಳಿ ಐದು ಕೋಟಿ ರೂಪಾಯಿ ನೆರವು ಈಗಾಗಲೇ ನೀಡಿದೆ. ಬೆಂಗಳೂರು ಮತ್ತು ಚೆನ್ನೈ ನಲ್ಲಿ ಭಕ್ತರು ಹಾಗು ದಾನಿಗಳಿಂದ 4.5 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅನಿವಾಸಿ ಭಾರತೀಯರು ಸೇರಿ ಅನೇಕ ದಾನಿಗಳು ದೇಣಿಗೆ ಭರವಸೆ ಕೊಟ್ಟು ಶ್ರೀ ಮಠಕ್ಕೆ ಹೊಸ ಹುಮ್ಮಸ್ಸು ತುಂಬಿದ್ದಾರೆಂದು ಮಂತ್ರಾಲಯ ಶ್ರೀಗಳು ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)