ಅಕ್ರಮ ಗಣಿಗಾರಿಕೆ : ಸಿಎಂ ಜಾಣತನ ಪ್ರದರ್ಶನ
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ರಾಜ್ಯ ಸರಕಾರ ಬಯಸಿ ಅಗತ್ಯ ಬಿದ್ದಲ್ಲಿ ಸಿಬಿಐ ನೆರವು ಕೋರುತ್ತೇವೆ. ರಾಜ್ಯದ ಗಡಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಹೇಳಲಾಗಿರುವ ಪ್ರದೇಶಗಳಲ್ಲಿ ಕಾಲಕಾಲಕ್ಕೆ ತಪಾಸಣೆ ನಡೆಸಲು ಅಧಿಕಾರಗಳಿಗೆ ಸೂಚನೆ ನೀಡಲಾಗಿದೆ ಎನ್ನುವುದು ಸಿಎಂ ಕೇಂದ್ರಕ್ಕೆ ಬರೆದಿರುವ ಪತ್ರದ ಸಾರಾಂಶವಾಗಿದೆ. ಈ ಪತ್ರದೊಂದಿಗೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿಯನ್ನು ಸಹ ಕೇಂದ್ರ ಕಳುಹಿಸಿಕೊಡಲಾಗಿದೆ.
ಪತ್ರದಲ್ಲಿ ಅಕ್ರಮ ಗಣಿಗಾರಿಕೆಯ ತನಿಖೆಯ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಮುಖ್ಯಮಂತ್ರಿ ಯಡಿಯೂರಪ್ಪ, ಅಗತ್ಯ ಬಿದ್ದರೆ ಕೂಡಲೇ ಸಿಬಿಐ ತನಿಖೆಗೆ ಮನವಿ ಮಾಡಿಕೊಳ್ಳುವ ಅಂಶವನ್ನು ಕೂಡಾ ಈ ಪತ್ರ ಪ್ರತಿಬಿಂಬಿಸುತ್ತಿದೆ. ಒಟ್ಟಿನಲ್ಲಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಇಷ್ಟಪಡದ ಯಡಿಯೂರಪ್ಪ ಜಾಣಕ್ಯ ನೀತಿಯನ್ನು ಅನುಸರಿಸಿದಂತೂ ದಿಟ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂತೋಷ ಹೆಗ್ಡೆ ಅವರು ಸಮಗ್ರ ವರದಿಯೊಂದನ್ನು ಸರಕಾರಕ್ಕೆ ನೀಡಿದ್ದರು. ಅದರಲ್ಲಿ ಪ್ರಮುಖವಾಗಿ ಗಡಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಹಾಗೂ ಗಡಿ ರೇಖೆ ಉಲ್ಲಂಘಿಸಿ ಗಣಿಗಾರಿಕೆ ನಡೆಸಿರುವ ಮಹತ್ವ ಸಂಗತಿಗಳನ್ನು ಲೋಕಾಯುಕ್ತರು ಬಹಿರಂಗಗೊಳಿಸಿದ್ದರು. ಈ ವರದಿಯನ್ನು ಯಡಿಯೂರಪ್ಪ ಅವರು ಕೇಂದ್ರಕ್ಕೆ ಕಳುಹಿಸಿದ್ದಾರೆ. ಕೇಂದ್ರ ಸಚಿವ ಬಿ ಕೆ ಹಂಡಿಕ್ ಅವರು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಒಪ್ಪಿದರೆ ಗಡಿ ಪ್ರದೇಶದಲ್ಲಿ ಸಿಬಿಐ ತನಿಖೆ ನಡೆಸುವುದಾಗಿ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ, ಸಿಬಿಐ ತನಿಖೆ ಅವಶ್ಯವಿಲ್ಲ ಎಂದು ಹೇಳುತ್ತಲೇ ಬಂದಿದ್ದರು.
(ದಟ್ಸ್ ಕನ್ನಡ ವಾರ್ತೆ)