ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ
ಕೊಡಚಾದ್ರಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಗಣಿಗಾರಿಕೆ ಪುನರಾರಂಭ ಆಗಲಿದೆ ಎಂಬ ಸುದ್ದಿ ಕಪೋಲಕಲ್ಪಿತವಾಗಿದ್ದು, ಅರಣ್ಯ, ಪರಿಸರ ಮತ್ತು ಗಣಿ ಇಲಾಖೆಗಳೂ ಕೂಡ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದವರು ಹೇಳಿದರು. ಈ ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯ ವಿಷಯ ಸದ್ಯ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ತೀರ್ಪು ಹೊರಬಂದ ನಂತರ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಫಿರ್ಯಾದುದಾರರು ನ್ಯಾಯಾಲಯದಲ್ಲಿ ಸದರಿ ಪ್ರದೇಶದಲ್ಲಿ ಈಗಾಗಲೇ ತೆಗೆದಿರಿಸಲಾಗಿದ್ದ 2 ಲಕ್ಷ ಟನ್ ಅದಿರನ್ನು ಸಾಗಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ವಾಸ್ತವದಲ್ಲಿ ಪರಿಸರವಾದಿಗಳು ಹೇಳುವಂತೆ ಇತ್ತೀಚಿನ ಭಾರೀ ಮಳೆಯಿಂದಾಗಿ ಇರಬಹುದಾದ ಅದಿರು ಇನ್ನಿಲ್ಲದಂತೆ ಕೊಚ್ಚಿಹೋಗಿದೆ ಎಂದವರು ಹೇಳಿದರು.
ಮೂಕಾಂಬಿಕ ಅಭಯಾರಣ್ಯ ಸೂಕ್ಷ್ಮ ಪ್ರದೇಶವಾಗಿದ್ದು, ಶರಾವತಿ ಕಣಿವೆ ಪರಿಸರ ಅಧ್ಯಯನದ ವರದಿಯು ಕೂಡ ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದು ತರವಲ್ಲ ಎಂದಿದೆ ಎಂದರು. ಅರಣ್ಯ, ಪರಿಸರ, ವನ್ಯ ಪ್ರಾಣಿಗಳ ಸಂರಕ್ಷಣೆ ಕುರಿತು ಪ್ರಾವಿಣ್ಯತೆ ಪಡೆದ ವಿಶೇಷ ವಿಜ್ಞಾನಿಗಳನ್ನು ಕರೆಸಿ ಪಶ್ಚಿಮ ಘಟ್ಟ - ಪ್ರದೇಶದ ಅಧ್ಯಯನ ನಡೆಸಿ, ಡಿಸೆಂಬರ್ 2ನೇ ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದೆಂದರು. ಪಶ್ಚಿಮಘಟ್ಟ ನದಿಕಣಿವೆ ವಿಷಯದಲ್ಲೂ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಮಹಾರಾಷ್ಟ್ರಗಳ ಸಂಸದರ ಸಭೆ ಕರೆದು ಅವರ ಸಲಹೆ - ಸೂಚನೆಯನ್ನು ಪಡೆಯುವಂತೆ ಕೇಂದ್ರದ ಅರಣ್ಯ ಹಾಗೂ ಪರಿಸರ ಮಂತ್ರಿಗಳನ್ನು ಅವರು ಒತ್ತಾಯಿಸಿದರು.
(ದಟ್ಸ್ ಕನ್ನಡವಾರ್ತೆ)