ಗಣಿಗಾರಿಕೆಗೇಕೆ ಸಿಬಿಐ ತನಿಖೆ : ಯಡಿಯೂರಪ್ಪ
ಆಸರೆ ಯೊಜನೆಗೆ ಶಂಕುಸ್ಥಾಪನೆ ನಂತರ ಹರಿಹರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಸಚಿವ ಬಿ ಕೆ ಹಂಡಿಕ್ ಅವರಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಕೇಂದ್ರಕ್ಕೆ ಶೀಘ್ರದಲ್ಲೇ ಉತ್ತರಿಸುವೆ, ಪತ್ರದಲ್ಲಿ ಏನಿರುತ್ತದೆ ಎಂಬುದು ನಿಮಗೇ ಗೊತ್ತಾಗಲಿದೆ ಎಂದಿದ್ದಾರೆ. ಅಕ್ರಮ ಗಣಿಗಾರಿಕೆಗ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರಕಾರ ಸಿಬಿಐ ತನಿಖೆ ನಡೆಸುತ್ತಿದೆ. ರಾಜ್ಯದಲ್ಲೂ ಅಂಥ ಕ್ರಮ ಕೈಗೊಳ್ಳಲು ಸರಕಾರ ಮುಂದಾಗುವುದೆ ಎಂಬ ಪ್ರಶ್ನೆಗೆ ಮೇಲಿನಂತೆ ಯಡಿಯೂರಪ್ಪ ಉತ್ತರಿಸಿದ್ದಾರೆ.
ರಾಜ್ಯ ಸರಕಾರದ ಬಗ್ಗೆ ಯಾವುದೇ ಅಭದ್ರತೆ ತಮ್ಮನ್ನು ಕಾಡುವುದಿಲ್ಲ. ತಾವು ಮುಖ್ಯಮಂತ್ರಿಯಾಗಿ 5 ವರ್ಷ ಅವಧಿ ಪೂರ್ಣಗೊಳಿಸುತ್ತೇನೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಮೈಸೂರು ಉಸ್ತುವಾರಿ ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಸಮಗ್ರವಾಗಿ ನಡೆಯಬೇಕೆಂದರೆ ರಾಜ್ಯ ಸರಕಾರವು ಕೇಂದ್ರದೊಂದಿಗೆ ಸಹಕರಿಸಬೇಕೆಂದು ಕೇಂದ್ರ ಗಣಿ ಸಚಿವ ಅಂಡಿಕ್ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರಿಗೆ ಪತ್ರ ಬರೆದ್ದರು. ಆಂದ್ರಪ್ರದೇಶದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದೆ. ರಾಜ್ಯದ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ಸೇರಿದಂತೆ ಆರು ಗಣಿ ಕಂಪನಿಗಳನ್ನು ಕೇಂದ್ರ ಉನ್ನತಾಧಿಕಾರ ಸಮಿತಿ ಶಿಫಾರಸ್ಸಿನ ಮೇರೆಗೆ ಆಂಧ್ರಸರಕಾರ ರದ್ದುಗೊಳಿಸುವಂತೆ ಆದೇಶ ಹೊರಡಿಸಿದೆ.
ಸಿಬಿಐ ತನಿಖೆ ಸಮಗ್ರವಾಗಿ ನಡೆದು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕರ್ನಾಟಕ ನೆರವೂ ಸಹ ಅಗತ್ಯವಾಗಿದೆ. ಆದ್ದರಿಂದ ಸಿಬಿಐ ತನಿಖೆಗೆ ಸಹಕಾರ ನೀಡುವುದಾಗಿ ನಿಮ್ಮ ಸರಕಾರ ಕೇಂದ್ರಕ್ಕೆ ಪತ್ರ ಬರೆಯಲಿ ಎಂದು ಅಂಡಿಕ್ ಮನವಿ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)