ಜನರಿಗೆ ಶಾಕ್ ಕೊಟ್ಟ ಬಿಜೆಪಿ ಸರಕಾರ
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಈ ಕುರಿತು ಅಧಿಕೃತ ಪ್ರಕಟಣೆಯನ್ನು ಬುಧವಾರ ಮಧ್ಯಾಹ್ನ ಹೊರಡಿಸಿದೆ. ಪ್ರತಿ ಯೂನಿಟ್ ಗೆ 10 ಪೈಸೆಯಿಂದ 30 ಪೈಸೆ ವರೆಗೆ ಏರಿಸಲಾಗಿದೆ. ಪರಿಷ್ಕೃತ ದರಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಆಯೋಗ ತಿಳಿಸಿದೆ.
ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಪ್ರವಾಹದ ಬೆನ್ನಲ್ಲೇ ಜನಸಾಮಾನ್ಯರಿಗೆ ವಿದ್ಯುತ್ ಶಾಕ್ ನ್ನು ಬಿಜೆಪಿ ಸರಕಾರ ನೀಡಿದೆ. ಇಂದು ಬುಧವಾರ ಮಧ್ಯರಾತ್ರಿಯಿಂದ ಪ್ರತಿ ಯೂನಿಟ್ ಗೆ 30 ಪೈಸೆಗೂ ಹೆಚ್ಚು ಏರಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಪರಿಷ್ಕೃತ ಪಟ್ಟಿ ಮುಂದಿನ ಮಂಗಳವಾರದಿಂದ ಜಾರಿಗೆ ಬರುತ್ತದೆ ಎಂದು ಆಯೋಗ ತಿಳಿಸಿದೆ.
ವಿದ್ಯುತ್ ವಿತರಣೆ ಕಂಪನಿಗಳು ಪ್ರತಿ ಯೂನಿಟ್ ಗೆ 51 ಪೈಸೆ ಹೆಚ್ಚಳ ಕೋರಿ, ಕೆಇಆರ್ ಸಿ ಕಳೆದ ಜೂನ್ ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದವು. ರಾಜ್ಯದ ನಾನಾ ಭಾಗಗಳಲ್ಲಿ ಸಾರ್ವಜನಿಕ ಸಮಾಲೋಚನೆ ನಡೆಸಿದ ಕೆಇಆರ್ ಸಿ ಅಂತಿಮವಾಗಿ 30 ಪೈಸೆ ಹೆಚ್ಚಿಸಲು ತೀರ್ಮಾನಿಸಿತ್ತು. ಕೇವಲ ವಿದ್ಯುತ್ ಬಿಲ್ ಅಷ್ಟೆ ಅಲ್ಲ ನಂದಿನಿ ಹಾಲಿಗೂ ಹೆಚ್ಚಿಗೆ ಹಣ ಕೊಡಿ ಎಂದು ಕೆಎಂಎಫ್ ಕೇಳುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊಸ ವರ್ಷದ ಮೊದಲ ದಿವಸ ಹೊರಬೀಳಬಹುದು. ಅಲ್ಲಿಯವರೆಗೂ ಹೆಚ್ಚು ಹಾಲು ಕುಡಿಯಿರಿ.
(ದಟ್ಸ್ ಕನ್ನಡ ವಾರ್ತೆ)