ಉಗ್ರ ಕಸಬ್ ನನ್ನು ಗಲ್ಲಿಗೇರಿಸಿ : ಕವಿತಾ
ನವೆಂಬರ್ 26ಕ್ಕೆ ಮುಂಬೈ ಭಯೋತ್ಪಾದನೆಗೆ ಒಂದು ವರ್ಷ ಪೂರೈಸಲಿದೆ. ಪಾಕಿಸ್ತಾನ ಮೂಲದ ಒಂಬತ್ತು ಉಗ್ರರು ಬೋಟ್ ಮೂಲಕ ಮುಂಬೈ ತಲುಪಿ ತಾಜ್ ಹೋಟೆಲ್ ಸೇರಿ ಮೂರು ಪ್ರಮುಖ ಸ್ಥಳಗಳನ್ನು ಒತ್ತೆಯಿರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಮುಂಬೈ ಭಯೋತ್ಪಾದನೆ ನಿಗ್ರಹ ಪಡೆಯ ಮುಖ್ಯಸ್ಥ ಐಎಎಸ್ ಅಧಿಕಾರಿ ಹೇಮಂತ್ ಕರ್ಕರೆ, ವಿಜಯ್ ಸಲಸ್ಕರ್, ಸಂದೀಪ್ ಉನ್ನಿಕೃಷ್ಣನ್, ಅಶೋಕ್ ಕಾಮ್ಟೆ ಸೇರಿದಂತೆ ಭಾರತದ 170ಕ್ಕೂ ಮಂದಿ ಸಾವನ್ನಪ್ಪಿದ್ದರು. 26 ನವೆಂಬರ್ 2008 ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿ ದಾಖಲಾಯಿತು. ಮೂರು ದಿನ ನಡೆದ ಪ್ರಹಸನಕ್ಕೆ ಭಾರತ ಭಾರಿ ಬೆಲೆಯನ್ನೇ ತೆರಬೇಕಾಯಿತು. ಈ ಮೂರು ದಿನದಲ್ಲಿ ಸುಮಾರು 5,000 ಕೋಟಿ ರುಪಾಯಿಗಳ ನಷ್ಟವನ್ನು ಭಾರತ ಅನುಭವಿಸಿತು.
ಅಜ್ಮಲ್ ಅಮೀರ್ ಕಸಬ್ ಸಿಕ್ಕಿಬಿದ್ದಿರುವ ಏಕೈಕ ಉಗ್ರನ ವಿಚಾರಣೆ ನಡೆಸಿದ ಭಾರತ, ಈ ಕೃತ್ಯ ಪಾಕಿಸ್ತಾನ ಸರಕಾರದ ಕೃಪಾಪೋಷಿತ ಕೃತ್ಯ ಎಂದು ಸಾಬೀತಾಯಿತು. ಆದರೆ, ಪಾಕಿಸ್ತಾನ ಮಾತ್ರ ನಮ್ಮ ತಪ್ಪಿಲ್ಲ ಎಂದು ಮೊಂಡು ವಾದವನ್ನು ಇಂದು ಕೂಡಾ ಮುಂದುವರಿಸಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಹೇಮಂತ್ ಕರ್ಕರೆ ಅವರ ಪತ್ನಿ ಕವಿತಾ ಕರ್ಕರೆ ಕಾಂಗ್ರೆಸ್ ಸೋನಿಯಾ ಗಾಂಧಿ ಅವರನ್ನು ಭೇಟಿ ಕಸಬ್ ನನ್ನು ಗಲ್ಲಿಗೇರಿಸಿ, ಆ ಮೂಲಕ ಮುಂಬೈ ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿ ಎಂದು ಒತ್ತಾಯಿಸಿದ್ದಾರೆ. ಆದರೆ, ಸೋನಿಯಾ ಗಾಂಧಿ ಅವರಿಂದ ಎಂತಹ ಭರವಸೆ ಸಿಕ್ಕಿದೆ ಎನ್ನುವುದು ತಿಳಿದು ಬಂದಿಲ್ಲ.
(ದಟ್ಸ್ ಕನ್ನಡ ವಾರ್ತೆ)