ಆಭರಣದಂಗಡಿ ದೋಚುವ ಮುಂಚೆ ಬಿತ್ತು ಕೈಗೊಳ
ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸಾಜೇಶ್, ಸರದಾರ್ ಪಾಶಾ, ಇಮ್ರಾನ್ ಮತ್ತು ತೊಹೀದ್ ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಅವರಿಂದ ಸಿಂಗರಿಸಲಾಗಿದ್ದ ಕ್ವಾಲಿಸ್ ವಾಹನ, ಏರ್ ಪಿಸ್ತೂಲು, ಹರಿತ ಆಯುಧ, ಮಂಕಿ ಕ್ಯಾಪ್, ಕೈಗವಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಫೋನ್ ಟ್ಯಾಪ್ ಮಾಡಿ ತನಿಖೆ ನಡೆಸುತ್ತಿದ್ದಾಗ ತನಿಷ್ಕ್ ಆಭರಣದಂಗಡಿ ದೋಚಲು ದುಷ್ಕರ್ಮಿಗಳು ಸಂಚು ಹೂಡಿದ್ದು ತಿಳಿದುಬಂದಿದೆ. ಇದಕ್ಕಾಗಿ ವ್ಯವಸ್ಥಿತಿ ಬಲೆ ಬೀಸಿದ ಸಂಪಿಗೆಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ಸಂಚಿನ ವಿಷಯವನ್ನು ಒಪ್ಪಿಕೊಂಡಿದ್ದಾರೆ.
ದರೊಡೆಗಾಗಿ ಸಾಕಷ್ಟು ತಯಾರಿ ನಡೆಸಿದ್ದ ನಾಲ್ವರು ಯಾರಿಗೂ ತಿಳಿಯಬಾರದೆಂದು ಕ್ವಾಲಿಸ್ ವಾಹನವನ್ನು ಹೂಗಳಿಂದ ಅಲಂಕರಿಸಿದ್ದರು. ವಾಹನದಲ್ಲಿ ಸಾಕಷ್ಟು ಆಯುಧಗಳನ್ನು ಶೇಖರಿಸಿಟ್ಟಿದ್ದರು. ಆದರೆ, ಸಂಚು ವಿಫಲವಾಗಿ ಪೊಲೀಸರ ಅತಿಥಿಗಳಾಗಿದ್ದಾರೆ.
ಇದೆಲ್ಲದರ ರೂವಾರಿ ಸಾಜೇಶ್ ಎಂಬಾತ ಕೇರಳ ಮೂಲದವನಾಗಿದ್ದು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾನೆ. ಕೇರಳದಲ್ಲಿಯೂ ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎನ್ನಲಾಗಿದೆ. ತನಗೆ ಹಣದ ಅವಶ್ಯಕತೆ ತುರ್ತಾಗಿದ್ದರಿಂದ ದರೊಡೆಗೆ ಇಳಿದಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)