ಶಿವಮೊಗ್ಗದಲ್ಲಿ ಸರಣಿ ದರೊಡೆ, ಶಂಕರಮಠ ಲೂಟಿ
ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಂಕರಮಠ ರಸ್ತೆಯಲ್ಲಿರುವ ಶಂಕರ ಮಠದ ದೇವಸ್ಥಾನದ ಬಾಗಿಲನ್ನು ಮುರಿದು, ದೇವರ ವಿಗ್ರಹಕ್ಕೆ ಹಾಕಲಾಗಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದರೋಡೆ ಮಾಡಲಾಗಿದೆ. ದೇವರ ವಿಗ್ರಹದ ಕವಚ ಹಾಗೂ ಒಡವೆಗಳನ್ನು ದೋಚಲಾಗಿದ್ದು, ಗುರುವಾರದಂದು ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಸ್ಥಳ ಪರಿಶೀಲಿಸಿದ್ದಾರೆ.
ಅಲ್ಲದೇ, ಗುರುವಾರದಂದು ರಾತ್ರಿ ಕೆಲವೊಂದು ಸರಗಳ್ಳತನ ಪ್ರಕರಣಗಳೂ ಸಹ ನಡೆದಿವೆ. ಒಂದಿಷ್ಟು ದಿನದಿಂದ ಸರಗಳ್ಳತನ ಪ್ರಕರಣಗಳಿಗೆ ಕಡಿವಾಣ ಬಿದ್ದಿತ್ತು. ಆದರೆ, ಗುರುವಾರದಂದು ರಾತ್ರಿ ಬಹುತೇಕ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣಗಳು ನಡೆದಿವೆ. ಜೊತೆಗೆ, ದರೋಡೆ ಪ್ರಕರಣಗಳೂ ಸಹ ಆಶ್ಚರ್ಯಕರ ರೀತಿಯಲ್ಲಿ ವರದಿಯಾಗಿವೆ.
ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುಡ್ಡದ ಮಲ್ಲಾಪುರ ದೇವಸ್ಥಾನದ ಬಾಗಿಲನ್ನು ಮುರಿದ ಕಳ್ಳರು ಸುಮಾರು 18 ಸಾವಿರ ರೂ. ಮೌಲ್ಯದ ಬೆಳ್ಳಿ ವಿಗ್ರಹ ಮತ್ತು ಕಾಣಿಕೆ ಹುಂಡಿಯನ್ನು ಅಪಹರಿಸಿದ್ದಾರೆ. ಈ ಪ್ರಕರಣ ಹೊಳೆಹೊನ್ನೂರು ಠಾಣೆಯಲ್ಲಿ ದಾಖಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕುವೆಂಪು ರಸ್ತೆಯ ಜಂಬಣ್ಣನ ಮಿಲ್ ಸಮೀಪ ವಿದ್ಯುತ್ ಲೋಡ್ ಶೆಡ್ಡಿಂಗ್ ಇದ್ದ ಸಂದರ್ಭದಲ್ಲಿ ಹೊನ್ನಾಳಿಯಿಂದ ತನ್ನ ಅಕ್ಕನ ಮನೆಗೆ ಬಂದಿದ್ದ ಸುಜಾತ (35) ಎಂಬಾಕೆ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ, ಗುಂಪೊಂದು ಸುಮಾರು 45 ಗ್ರಾಂ. ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಯಿತು.
ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಂದಿನಿ ಹಾಲನ್ನು ತರಲು ಹೋದ ಮಹಿಳೆಯೋರ್ವಳ 54ಗ್ರಾಂ. ತೂಕದ ಬಂಗಾರದ ಸರವನ್ನು ಕಳ್ಳರು ಅಪಹರಿಸಿದ ಘಟನೆ ನಡೆಯಿತು. ಸುಮಾರು 72 ವರ್ಷ ವಯಸ್ಸಿನ ರಾಜೇಶ್ವರಿ ಎಂಬುವವರು ತಿಲಕ್ನಗರದ 3ನೇ ತಿರುವಿನಲ್ಲಿ ಹಾಲು ತರಲು ಹೋಗುತ್ತಿದ್ದಾಗ ಈ ಘಟನೆ ನಡೆಯಿತು. ಜಯನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಅಪಘಾತ, ವ್ಯಕ್ತಿ ಸಾವು;
ಗಾಜನೂರು ಬಳಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಬಸ್ ಹಾಗೂ ಟಾಟಾ ಎಸಿ ವಾಹನಗಳ ನಡುವಿನ ಡಿಕ್ಕಿಯಲ್ಲಿ ಟಾಟಾ ವಾಹನದ ಚಾಲಕ ತೀವ್ರವಾಗಿ ಗಾಯಗೊಂಡು ಚಿಕಿತ್ಸೆಗೆ ಒಳಪಡಿಸಲಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಈ ಚಾಲಕ ಸಾವು ಕಂಡಿದ್ದಾನೆ. ಸಾವು ಕಂಡ ಚಾಲಕನನ್ನು ಶಿಕಾರಿಪುರದ ಶಿವಕುಮಾರ್ ಎಂದು ಹೇಳಲಾಗಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.