ಮರೀಬೇಡಿ ಸೋಮವಾರ ಕಡಲೆಕಾಯಿ ಪರಿಷೆ!
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಬಿ.ಎನ್.ವಿಜಯಕುಮಾರ್, ಡಾ.ಪ್ರೇಮಚಂದ್ರ ಸಾಗರ್, ಎಂಎಲ್ ಸಿಗಳಾದ ಪ್ರೊ.ಎಂ.ಆರ್.ದೊರೆಸ್ವಾಮಿ, ಡಾ.ದೊಡ್ಡರಂಗೇಗೌಡ, ಡಾ.ಎಸ್.ಆರ್.ಲೀಲಾವತಿ ಮತ್ತಿತರರು ಭಾಗವಹಿಸಿದಲಿದ್ದಾರೆ.
ಸಂಜೆ 6ಗಂಟೆಗೆ ಟಿ.ಆರ್.ಶಾಮಣ್ಣ ಉದ್ಯಾನವನದಲ್ಲಿ(ಬ್ಯೂಗಲ್ ರಾಕ್) ವಿದ್ಯಾಶಂಕರ್ ಮತ್ತು ಶಿಷ್ಯ ವೃಂದದಿಂದ ಸಪ್ತ ಮಾತೃಕಾ ನೃತ್ಯ ರೂಪಕ ಹಾಗೂ ನಂದಿನಿ ವಿಜಯವಿಠಲ ಮತ್ತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನ.7ರಂದು ಸಂಜೆ ಆರು ಗಂಟೆಗೆ ಶ್ರೀನಗರದ ಮದ್ದೂರಮ್ಮ ಆಟದ ಮೈದಾನದಲ್ಲಿ ಲಯತರಂಗ ತಂಡದವರಿಂದ ವಾದ್ಯ ಸಂಗೀತ, ಕತ್ರಿಗುಪ್ಪೆಯ ಕೆ.ಎಸ್.ನರಸಿಂಹಸ್ವಾಮಿ ಉದ್ಯಾನದಲ್ಲಿ ವಿದುಷಿ ಶೋಭಾ ನಾಗರಾಜ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ದೇವರನಾಮ ಗಾಯನ ನಡೆಯಲಿದೆ.
ಬಾದಾಮಿ, ಗೋಡಂಬಿ ತಿನ್ನಲು ಸಾಧ್ಯವಾಗದ ಬಡವರಿಗೆ ಕಡಲೇಕಾಯಿಯೇ ಬಾದಾಮಿ - ಗೋಡಂಬಿ ಎಲ್ಲ. ಹೀಗಾಗೇ ಇದಕ್ಕೆ ಬಡವರ ಬಾದಾಮಿ ಎಂಬ ಹೆಸರು. ಕಡಲೇಕಾಯಿ ತಿನ್ನುತ್ತಾ, ಚುಮುಚುಮು ಚಳಿಯಲ್ಲಿ ಗೆಳೆಯರೊಂದಿಗೆ ಹರಟೆಹೊಡೆಯುತ್ತಾ ಬಸವನಗುಡಿಯಲ್ಲಿ ಅಲೆಯುವುದೇ ಒಂದು ಮಜಾ... ನೀವು ಪರಿಷೆಗೆ ಬರುತ್ತೀರಾ ತಾನೆ?
(ದಟ್ಸ್ ಕನ್ನಡ ವಾರ್ತೆ)