ಹಸೂಡಿ ಮಕ್ಕಳಿಂದ ಚಾಚಾ ನೆಹರೂಗೆ ನಮನ
ಮಕ್ಕಳ ದಿನಾಚರಣೆಯಂದು ಮುಖ್ಯ ಅತಿಥಿಯೊಬ್ಬರನ್ನು ಕರೆಸಿ ಚಾಚಾ ನೆಹರೂ ಬಗ್ಗೆ, ಮಕ್ಕಳ ದಿನಾಚರಣೆ ಬಗ್ಗೆ ಭಾಷಣ ಬಿಗಿಸುವುದು ರೂಢಿಯಾಗಿದೆ. ಆದರೆ, ಇಂದು ಮಕ್ಕಳೇ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದ್ದರು. ಮಕ್ಕಳ ಮುದ್ದುಮುದ್ದಾದ ಭಾಷಣಗಳೂ ಸಭಿಕರನ್ನು ಮುದ ನೀಡಿದವು.
ಶಾಲೆಯ ಯು.ಕೆ.ಜಿ.ವಿದ್ಯಾರ್ಥಿನಿ ವಾಹಿನೀ ಬಾಲಕೃಷ್ಣ ಮಾತನಾಡಿ ಜವಾಹರಲಾಲ್ ನೆಹರು ಅವರಿಗೆ ಚಿಕ್ಕ ಮಕ್ಕಳೆಂದರೆ ಪಂಚಪ್ರಾಣವಾಗಿತ್ತು. ಆ ಕಾರಣಕ್ಕೆ ಅವರನ್ನು ಮಕ್ಕಳು ಚಾಚಾ ನೆಹರು ಎಂದು ಕರೆಯುತ್ತಿದ್ದರು. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ನೆಹರು ಅವರೂ ಒಬ್ಬರಾಗಿದ್ದರು ಎಂದ ವಾಹಿನೀ ಅವರು ನಮ್ಮ ದೇಶಕ್ಕಷ್ಟೇ ಅಲ್ಲ. ಇಡೀ ಪ್ರಪಂಚಕ್ಕೇ ಪ್ರಸ್ತುತರು. ಶಾಂತಿ ಪ್ರಿಯರಾಗಿದ್ದ ನೆಹರು ಇಂದಿನ ಪುಟಾಣಿಗಳಿಗೆ ಆದರ್ಶರು ಎಂದು ನೆಹರು ಅವರ ಗುಣಗಾನ ಮಾಡಿದಳು.
ಶಾಲೆಯ ನಾಲ್ಕನೇ ತರಗತಿಯ ಮಕ್ಕಳಾದ ಧನುಷ್, ನಟರಾಜ, ಸ್ನೇಹಾ, ಮುಂತಾದವರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದುದು ವಿಶೇಷವಾಗಿತ್ತು. ಶಾಲೆಯ ಶಿಕ್ಷಕಿಯರಾದ ಸುಮಾ, ಚೇತನಾ, ಗೀತಾ, ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ನಂತರ ಚಿಣ್ಣರಿಂದ ಮನರಂಜನಾ ಕಾರ್ಯಕ್ರಮ ಜರುಗಿತು.
(ದಟ್ಸ್ ಕನ್ನಡ ವಾರ್ತೆ)