ಸಿಎಂಗೆ ಸ್ವಾಭಿಮಾನ ಇದೆಯಾ? ಎಚ್ಡಿಕೆ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಹಣಬಲ, ತೋಳ್ಬಲಕ್ಕೆ ಮಣಿಯುವುದಿಲ್ಲ ಎಂದು ಹೇಳಿಕೆ ನೀಡುವ ಸಿಎಂ, ಬೆನ್ನಲ್ಲೇ ಬಳ್ಳಾರಿ ಮತ್ತು ಗದಗದ ಅಧಿಕಾರಿಗಳನ್ನು ಮರುನೇಮಕ ಮಾಡುತ್ತಾರೆ. ರೆಡ್ಡಿ ಸಹೋದರರ ಕಪಿ ಮುಷ್ಠಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಆ ಸ್ಥಾನವನ್ನು ನಿಭಾಯಿಸಲು ಸಾಧ್ಯವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉಸಿರುಗಟ್ಟಿಸುವ ರಾಜಕೀಯ ವಾತಾವರಣದಲ್ಲಿ ಸ್ವಾಭಿಮಾನ ಕಳೆದುಕೊಂಡು ಮುಖ್ಯಮಂತ್ರಿಯಾಗಿ ಮುಂದುವರಿಯುವ ಅಗತ್ಯ ಯಡಿಯೂರಪ್ಪ ಅವರಿಗೆ ಏನಿತ್ತು ? ತಮ್ಮ ಜೊತೆಯಲ್ಲಿದ್ದ ಪ್ರಿನ್ಸಿಪಲ್ ಸೆಕ್ರೆಟರಿಯನ್ನೇ ರಕ್ಷಿಸಲಾಗದ ಇವರು ರಾಜ್ಯದ ಜನತೆಯನ್ನು ಹೇಗೆ ಕಾಪಾಡಿಯಾರು ? ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲನಾಗಿದ್ದೇನೆ ಎಂದು ಖುದ್ದು ಸಿಎಂ ಒಪ್ಪಿಕೊಂಡಿದ್ದಾರೆ. ಹೀಗೆ ವಿಫಲರಾಗಲು ಕಾರಣವೇನು ಎಂದು ಜನತೆಯ ಮುಂದೆ ವಿವರಿಸಲಿ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಲೋಡ್ ಶೆಡ್ಡಿಂಗ್ ವಿರುದ್ದ ನವೆಂಬರ್ 23ರಂದು ರಾಜ್ಯದ ಎಲ್ಲ ಭಾಗಗಳಲ್ಲೂ ಪ್ರತಿಭಟನೆ ನಡೆಸಲಾಗುವುದು. ನೆರೆ ಸಂತ್ರಸ್ತರ ಪರಿಹಾರಕ್ಕೆ ಸರಕಾರ ಧಾವಿಸದಿದ್ದಲ್ಲಿ ಜೆಡಿಎಸ್ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಕುಮಾರಸ್ವಾಮಿ ಸರಕಾರವನ್ನು ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)