ಬಿಜೆಪಿಯನ್ನು ಜನತೆ ಕ್ಷಮಿಸುವುದಿಲ್ಲ: ಎಚ್ಡಿಕೆ
ಮಂಡ್ಯ, ನ.9: ರಾಜ್ಯದ ಜನತೆಯ ಹಿತ ಕಡೆಗಣಿಸಿ ಬಿಜೆಪಿ ನಾಯಕರು ಇದೇ ರೀತಿ ರಾಜಕೀಯ ಅತಂತ್ರ ಸ್ಥಿತಿ ಮುಂದುವರಿಸಿದರೆ ಜನರೇ ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಬ್ಯಾಡ್ಮಿಂಟನ್ ಪಂದ್ಯಾವಳಿ ವೀಕ್ಷಣೆಗೆ ಬಂದಿದ್ದ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೀಗೆಂದರು. ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತವನ್ನು ಬಗೆಹರಿಸಲು ಬಿಜೆಪಿ ಹೈಕಮಾಂಡ್ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹಿಂದಿನಿಂದಲೂ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ, ಇಂದು ಕಣ್ಣೀರಿಡುವಂತಹ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ನಂಬಿದವರನ್ನು ಕೈಬಿಡುವ ಸ್ಥಿತಿಯೂ ಬರುತ್ತಿರಲಿಲ್ಲ ಎಂದು ಪ್ರತಿಕ್ರಿಯಿಸಿದರು.
ರಾಜ್ಯದ ಜನತೆ ಐದು ವರ್ಷ ಅಧಿಕಾರ ನಡೆಸಲಿ ಎಂದು ಜನಪ್ರತಿನಿಧಿಗಳನ್ನು ಚುನಾಯಿಸಿದ್ದಾರೆ. ಆದರೆ, ಇದನ್ನು ಮರೆತಿರುವ ಶಾಸಕರು ರೆಸಾರ್ಟ್ನಲ್ಲಿ ಮೋಜು ಮಾಡುತ್ತಿದ್ದಾರೆಂದು ಟೀಕಿಸಿದರು. ನೆರೆಯಿಂದಾಗಿ ಲಕ್ಷಾಂತರ ಜನರು ಸಂಕಷ್ಟದ ಸ್ಥಿತಿಯಲ್ಲಿರುವಾಗ ಬಿಜೆಪಿಯ ಮಂದಿ ಭಿನ್ನಮತದಲ್ಲಿ ತೊಡಗಿರು ವುದನ್ನು ಉತ್ತರ ಕರ್ನಾಟದಕ ಜನತೆ ಕ್ಷಮಿಸುವುದಿಲ್ಲ. ಹಾಗೆಯೇ ಗಣಿಧಣಿ ಬೆಂಬಲಿಗ ಶಾಸಕರು ರೆಸಾರ್ಟ್ ರಾಜಕಾರಣ ಮಾಡುತ್ತಿರುವುದನ್ನು ಜನತೆ ಗಮನಿಸುತ್ತಿದ್ದಾರೆ. ಇದು ಮುಂದುವರಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
(ಏಜೆನ್ಸೀಸ್)