ಲಾಲ್ಬಾಗಿನಲ್ಲಿ ನೀವು ವಾಕಿಂಗ್ ಮಾಡ್ತೀರಾ?
ಲಾಲ್ ಬಾಗಿನಲ್ಲಿ ಭದ್ರತೆ ಮತ್ತು ಶಿಸ್ತಿನ ದೃಷ್ಟಿಯಿಂದ ಈ ಕ್ರಮ ತಕ್ಷಣವೇ ಜಾರಿಗೆ ಬಂದಿದೆ. ಪಾರ್ಕ್ ಬಳಸುವವರಿಗೆ ಉದ್ಯಾನವನದಲ್ಲಿ ನಿತ್ಯ ಕಾಡುವ ತರಲೆಗಳ ಉಪಟಳ ತಪ್ಪಿಸುವುದೇ ಈ ಕ್ರಮದ ಉದ್ದೇಶವಾಗಿದೆ. ಸುವರ್ಣ ಕರ್ನಾಟಕ ಉದ್ಯಾನ ಪರಿಷತ್ ಈ ಕ್ರಮವನ್ನು ಜಾರಿಗೆ ತರಬೇಕೆಂದು ಎರಡು ವರ್ಷಗಳ ಹಿಂದೆಯೇ ಚಿಂತಿಸಿತ್ತಾದರೂ ಕಾರಣಾಂತರಗಳಿಂದ ಜಾರಿಗೆ ಬಂದಿರಲಿಲ್ಲ. ದಿನಂಪ್ರತಿ ಬೆಳಗಿನ ಹೊತ್ತು ಲಾಲ್ ಬಾಗಿನಲ್ಲಿ ಕನಿಷ್ಠ 3000 ಮಂದಿ ನಡೆಯುತ್ತಾರೆ.
ಈ ಕ್ರಮದ ಮೂಲಕ ಜನತೆಯಿಂದ ತೆರಿಗೆ ವಸೂಲಿ ಮಾಡಿ ಹಣ ಮಾಡುವ ಉದ್ದೇಶ ಲಾಲ್ ಬಾಗಿಗೆ ಇಲ್ಲ. ಕೇವಲ ಭದ್ರತೆಯ ದೃಷ್ಟಿಯಿಂದ "ಹಣ ಕೊಟ್ಟು ಬಳಸಿರಿ" ಯೋಜನೆ ಜಾರಿಗೆ ತರಲಾಗಿದೆ ಎಂದು ತೋಟಗಾರಿಗೆ ಇಲಾಖೆಯ ಅಧ್ಯಕ್ಷ ಎನ್. ಜಯರಾಮ್ ಸ್ಪಷ್ಟಪಡಿಸಿದ್ದಾರೆ. ಈ ಕ್ರಮಗಳ ಮೂಲಕ ಉದ್ಯಾನವನ ಬಳಸುವವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಇರಾದೆ ತೋಟಗಾರಿಕೆ ಇಲಾಖೆಗೆ ಇದೆ.
ಪಾರ್ಕಿನಲ್ಲಿ ವಾಕ್ ಮಾಡಬಯಸುವವರು ತಮ್ಮ ಹೆಸರು, ವಿಳಾಸ ಮತ್ತು ಭಾವಚಿತ್ರ ಸಮೇತ ಪಾರ್ಕಿನ ಕಚೇರಿಗೆ ತೆರಳಿ 200 ರೂಪಾಯಿ ಕೊಟ್ಟು ಗುರುತಿನ ಚೀಟಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ. ಈ ಯೋಜನೆ ತಕ್ಷಣಕ್ಕೆ ಜಾರಿಗೆ ಬಂದಿದೆ, ನೆನಪಿಡಿ. ಈ ಯೋಜನೆ ಜಾರಿಗೆ ಬಂದಿರುವುದು ತಮಗೆ ಸಂತಸ ತಂದಿದೆ ಎಂದು ನಿತ್ಯ ಬೆಳಗ್ಗೆ ಪಾರ್ಕಿನಲ್ಲಿ 8 ಕಿಮಿ ನಡೆಯುವ ಹವ್ಯಾಸ ಇಟ್ಟುಕೊಂಡಿರುವ ಉದ್ಯಮಿ ಶಂಕರಲಿಂಗ ಸ್ವಾಮಿ ಮತ್ತು ಅವರ ಪತ್ನಿ ಶ್ರೀಲಕ್ಷ್ಮೀ ದಟ್ಸ್ ಕನ್ನಡಕ್ಕೆ ತಿಳಿಸಿದರು.
ಹಣ ಕೊಟ್ಟು, ಗುರುತಿನ ಚೀಟಿ ಇಟ್ಟುಕೊಂಡು ಸಸ್ಯಕಾಶಿಯಲ್ಲಿ ನಡೆಯಿರಿ ಯೋಜನೆಯನ್ನು ದಟ್ಸ್ ಕನ್ನಡ ಬೆಂಬಲಿಸುತ್ತದೆ. ನಿಮ್ಮ ಅಭಿಪ್ರಾಯ ಹೇಗೋ?
(ದಟ್ಸ್ ಕನ್ನಡ ವಾರ್ತೆ)