ಧ್ವಜಸ್ತಂಭ ತುಂಡು : ಕರುಣಾಕರರೆಡ್ಡಿಗೆ ವಿಘ್ನ
ಸುಮಾರು ಒಂದು ಲಕ್ಷ ರುಪಾಯಿ ವೆಚ್ಚದಲ್ಲಿ 31 ಅಡಿ ಎತ್ತರದ ಧ್ವಜಸ್ತಂಬನಿರ್ಮಿಸಲಾಗುತ್ತಿತ್ತು. ಧ್ವಜಸ್ತಂಬ ಪ್ರತಿಸ್ಥಾಪಿಸುವ ಸ್ಥಳದಲ್ಲಿ ವಿಶೇಷ ಧಾರ್ಮಿಕ ವಿಧಿ - ವಿಧಾನಗಳು ಜರಗಿದವು. ಗುರುವಾರ ಬೆಳಗಿನ ಜಾವ ರೆಡ್ಡಿ ಪತ್ನಿ ಜೊತೆ ಧ್ವಜಸ್ತಂಬ ಪ್ರತಿಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಂದಡೆ ಪೂಜಾ ವಿಧಿ ವಿಧಾನಗಳು ನಡೆಯುತ್ತಿದ್ದರೆ ಇನ್ನೊಂದೆಡೆ ಕ್ರೇನ್ ಮೂಲಕ ಧ್ವಜಸ್ತಂಬವನ್ನು ದೇವಾಲಯದೊಳಗೆ ತರುವ ಕೆಲಸ ನಡೆಯುತ್ತಿತ್ತು. ಕ್ರೇನ್ ಮೂಲಕ ಧ್ವಜಸ್ತಂಬವನ್ನು ದೇವಾಲಯದೊಳಗೆ ತರುತ್ತಿದ್ದಂತೆ ಕ್ರೇನ್ ಚೈನ್ ಸರಿದು ಕಂಬ ಕೆಳಗಡೆ ಬಿದ್ದು ಎರಡು ತುಂಡಾಯಿತು.
ಘಟನೆಯಿಂದ ವಿಚಲಿತರಾದ ಕರುಣಾಕರ ರೆಡ್ಡಿ ತಮ್ಮ ಪತ್ನಿಯೊಂದಿಗೆ ಪೂಜಾ ಸಾಮಗ್ರಿಗಳನ್ನು ಅಲ್ಲೇ ಬಿಟ್ಟು ಹೊರ ನಡೆದರು. ಅದೃಷ್ಟವಶಾತ್ ಘಟನೆಯಲ್ಲಿ ಏನೂ ಅನಾಹುತ ಸಂಭವಿಸಲಿಲ್ಲ. ನಿವಾಸದಲ್ಲಿ ನಾಗರಹಾವು ಕಾಣಿಸಿಕೊಂಡಿದ್ದಕ್ಕೆ 'ಅಪಶಕುನ' ಎಂದು ಹೇಳಿಕೆ ನೀಡಿದ್ದ ನಾಡಿನ ಜ್ಯೋತಿಷಿಗಳು ಈ ಘಟನೆಗೆ ಯಾವ ರೀತಿ ಹೇಳಿಕೆ ನೀಡುತ್ತಾರೆಂದು ಕಾದು ನೋಡಬೇಕು.
(ದಟ್ಸ್ ಕನ್ನಡ ವಾರ್ತೆ)