ನ.12 ರಿಂದ ಧರ್ಮಸ್ಥಳ ಲಕ್ಷದೀಪೋತ್ಸವ
ಧರ್ಮಸ್ಥಳ, ನ. 6 : ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ನ.12 ರಿಂದ 17ರ ವರೆಗೆ ನಡೆಯಲಿದೆ.
ನ.12ರಂದು ಸಂಜೆ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಜಿ. ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಉದ್ಘಾಟಿಸಲಿದ್ದಾರೆ. ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆ ಉತ್ಸವ ಜರಗಲಿದೆ. ನ.13 ರಂದು ಸ್ವಾಮಿಯ ಕೆರೆಕಟ್ಟೆ ಉತ್ಸವ, ನ.14ರಂದು ಲಲಿತಕಲಾ ಗೋಷ್ಠಿ ನಡೆಯುವುದು. ನ.15ರಂದು ಸರ್ವಧರ್ಮ ಸಮ್ಮೇಳನ ಜರುಗಲಿದೆ.
ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮದ ವೀರೇಶಾನಂದ ಸರಸ್ವತಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಬಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮೈಸೂರಿನ ಪ್ರೊ. ಜೀವಂಧರ ಕುಮಾರ್ ಹೊಸಪೇಟೆ, ಡಾ.ಬಿ.ಇಸ್ಮಾಯಿಲ್, ರೋನಾಲ್ಡ್ ಕೊಲಾಸೋ ಉಪನ್ಯಾಸ ನೀಡಲಿದ್ದಾರೆ.
ನ.16 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆರ್.ಕೆ. ಅಧ್ಯಕ್ಷತೆ ವಹಿಸುವರು. ತ್ರಿಭಾಷಾ ಸಿನಿಮಾ ತಾರೆ ಲಕ್ಷ್ಮಿ ಗೋಪಾಲಸ್ವಾಮಿ ಅವರಿಂದ ಭರತನಾಟ್ಯ ಕಾರ್ಯಕ್ರಮವಿದೆ. ನ.17ರಂದು ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)