ನಾಯಕತ್ವ ಬದಲಾವಣೆ ಇಲ್ಲ ? ಹೈಕಮಾಂಡ್
ಈ ಮೂಲಕ ರೆಡ್ಡಿ ಮತ್ತು ಯಡಿಯೂರಪ್ಪ ನಡುವಿನ ಹಗ್ಗಾ ಜಗ್ಗಾಟ ಮತ್ತೊಂದು ಮಜಲು ಪಡೆದುಕೊಳ್ಳುವ ಸಾಧ್ಯತೆ ಇದೆ. ನಾಲ್ಕು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟದ್ದ ಜನಾರ್ದನರೆಡ್ಡಿ ನಾಯಕತ್ವ ಬದಲಾವಣೆಗೆ ಬಿಗಿಪಟ್ಟು ಹಿಡಿದಿದ್ದರು. ಈ ಸಂಬಂಧ ಸುಷ್ಮಾ ಸ್ವರಾಜ್ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.
ಬುಧವಾರ ಸಂಜೆ ದಿಲ್ಲಿಗೆ ತೆರಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಎರಡು ಬಣಗಳ ಬೇಡಿಕೆಗಳನ್ನು ಆಲಿಸಿದ ನಂತರ ಅಂತಿಮವಾಗಿ ಪಕ್ಷದ ಹೈಕಮಾಂಡ್ ರೆಡ್ಡಿ ಬಳಗದ ನಾಯಕತ್ವ ಬದಿಗಿರಿಸಿ ಉಳಿದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ. ಆದರೆ ರೆಡ್ಡಿ ಮಾತ್ರ ಸಿಎಂ ಅವರನ್ನೇ ಕಿತ್ತು ಹಾಕಬೇಕು ಎನ್ನುವುದು ಹಿಡಿದಿರುವ ಹಠ.
ಅಡ್ವಾಣಿ ಹೊರತುಪಡಿಸಿ ರಾಜನಾಥ್ ಸಿಂಗ್ ನಿವಾಸದಲ್ಲಿ ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಅನಂತಕುಮಾರ್, ಅರುಣ್ ಜೇಟ್ಲಿ ನೇತೃತ್ವದ ಕೋರ್ ಕಮೀಟಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರೆಸಿ ಮಾತುಕತೆ ನಡೆಸಲಾಯಿತು. ಆನಂತರ ಈ ಎಲ್ಲ ನಾಯಕರು ಅಂತಿಮವಾಗಿ ಯಡಿಯೂರಪ್ಪ ಅವರನ್ನೇ ನಾಯಕರಾಗಿ ಮುಂದುವರಿಸಲು ತೀರ್ಮಾನಿಸಿದೆ.
(ಏಜನ್ಸೀಸ್)