ಅಲ್ಪ ಸಂಖ್ಯಾತರಿಗೆ ತಲುಪದ ನೆರವು: ಆಲಿಖಾನ್
ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸರ್ಕಾರದ ವಿವಿಧ ಇಲಾಖೆಗಳಿಂದ ಅಲ್ಪ ಸಂಖ್ಯಾತರಿಗೆ ಲಭ್ಯವಿರುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಒಂದು ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಹಾಗೆ ಹೇಳಿದ್ದಾರೆ. ಸರ್ಕಾರದ ಸವಲತ್ತುಗಳ ವಿತರಣೆಯಲ್ಲಿ ಮಧ್ಯವರ್ತಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ನಕಾರಾತ್ಮಕ ಧೋರಣೆ ತಾಳಿರುವುದರಿಂದ ಅಲ್ಪ ಸಂಖ್ಯಾತರಿಗೆ ಸರ್ಕಾರದ ಸವಲತ್ತುಗಳು ಸರಿಯಾಗಿ ದೊರೆಯುತ್ತಿಲ್ಲ.
ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಸರ್ಕಾರ ತನ್ನ ಆಯವ್ಯಯದಲ್ಲಿ ಮೀಸಲಿಟ್ಟ ರೂ.186 ಕೋಟಿ ಅನುದಾನದಲ್ಲಿ ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಇದರಲ್ಲಿ ಅರ್ಧದಷ್ಟು ಖರ್ಚಾಗಿರುವುದಿಲ್ಲ. ಫಲಾನುಭವಿಗಳ ಆಯ್ಕೆ, ಸಾಲ ಪಡೆಯುವ ವಿಧಾನ ಮತ್ತು ಕ್ರಮ ಮುಂತಾದವುಗಳು ಸುಲಭವಾಗಿ ಸಿಗುವಂತಾಗಬೇಕು. ಇಲ್ಲದಿದ್ದರೆ ಈ ಜನ ಈಗಿರುವಂತೆಯೇ ಇರುತ್ತಾರೆ ಎಂದು ಅವರು ತಿಳಿಸಿದರು.
ಕ್ರೈಸ್ತ, ಜೈನ, ಮುಸಲ್ಮಾನ ಸಮಾಜಗಳಲ್ಲಿ ಮಹಿಳೆಯರು ಮುಖ್ಯವಾಹಿನಿಯಲ್ಲಿ ಸೇರಬೇಕು. ಈಗ ಮುಸ್ಲಿಂ ಮಹಿಳೆಯರು ಮುಂದೆ ಬರುತ್ತಿರುವುದು ಆ ಸಮಾಜದ ಅಭಿವೃದ್ಧಿಯ ಒಂದು ಮುಖ ಎಂದು ತಾವು ತಿಳಿಯಬೇಕು, ಅದರಂತೆ, ಇತರೆ ಸಮಾಜದ ಮಹಿಳೆಯರು ಸರ್ಕಾರದ ಮುಖ್ಯವಾಹಿನಿಯಲ್ಲಿ ಸೇರಬೇಕು ಎಂದರು ಖಾನ್ ಬಯಸಿದರು.
ಆಯೋಗದ ಅಧ್ಯಕ್ಷ ಅಲ್ಹಾಜ್ ಖುಸ್ರೋ ಖುರೇಶಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮದ್ ಸನಾವುಲ್ಲಾ, ನಗರಜಿಲ್ಲೆ ಜಿಲ್ಲಾಧಿಕಾರಿ ಜಿ.ಎನ್. ನಾಯಕ್, ಆಯೋಗದ ಕಾರ್ಯದರ್ಶಿ ಅತೀಕ್ ಅಹಮದ್, ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಅಲಿ ರಜ್ವಿ, ಅಲ್ಪ ಸಂಖ್ಯಾತರ ಇಲಾಖೆ ನಿರ್ದೇಶಕ ಅಬ್ದುಲ್ ಜಬ್ಬಾರ್ ಹಾಗು ಇತರ ಗಣ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)