ಕರವೇ ಪ್ರಾದೇಶಿಕ ಪಕ್ಷ ಘೋಷಣೆ
ಕನ್ನಡ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ವಿಷಯ ತಿಳಿಸಿರುವ ಅವರು, ಮುಂಬರುವ ಚುನಾವಣೆಯಲ್ಲಿ ಕರವೇ ಒಂದು ರಾಜಕೀಯ ಪಕ್ಷವಾಗಿ ಜನರ ಮುಂದೆ ಹೋಗಲಿದೆ ಎಂದರು. ಪಕ್ಷಕ್ಕೆ ಯಾವ ಹೆಸರಿಡಬೇಕು ಎಂದು ಇನ್ನೂ ತೀರ್ಮಾನಿಸಿಲ್ಲ. ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ರಕ್ಷಣೆಯ ವಿಷಯದಲ್ಲಿ ಈಗಿನ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸಂಪೂರ್ಣವಾಗಿ ಸೋತಿವೆ ಎಂದು ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಿಗರ ದನಿಯನ್ನು ಪ್ರತಿನಿಧಿಸಬೇಕಾದ ಪ್ರಾದೇಶಿಕ ಪಕ್ಷವೊಂದರ ಅಗತ್ಯ ಇದೆ. ಕಳೆದ ಉಪಚುನಾವಣೆಗಳು ಹಾಗೂ ಬೆಳಗಾವಿಯ ಸ್ಥಳೀಯ ಸಂಸ್ಥೆಗಳು ಚುನಾವಣೆಯಲ್ಲಿ ಕರವೇ ತನ್ನ ಶಕ್ತಿ ಪ್ರದರ್ಶಿಸಿದೆ ಎಂದು ಹೇಳಿದರು. ಈ ಬೆಳವಣಿಗೆಯೊಂದಿಗೆ ಗೌಡರು ತಮ್ಮ ಕನ್ನಡ ವೇದಿಕೆಯನ್ನು ರಾಜಕೀಯ ಪಕ್ಷವಾಗಿ ಮಾರ್ಪಡಿಸುತ್ತಾರೆ ಎಂಬ ಬಹುದಿನಗಳ ಊಹಾಪೋಹಕ್ಕೆ ತೆರೆ ಬಿದ್ದಿದೆ.
ಇನ್ನೇನಿದ್ದರೂ ಅವರ ಮುಂದಾಳತ್ವದಲ್ಲಿ ಕನ್ನಡ ಪಕ್ಷ ವೊಂದು ಅಸ್ಥಿತ್ವಕ್ಕೆ ಬರಬೇಕಿದೆ. ಕನ್ನಡನಾಡಿನಲ್ಲಿ ಚಾಲ್ತಿಗೆ ಬಂದ ಪ್ರಾದೇಶಿಕ ಪಕ್ಷಗಳೆಲ್ಲ ಸೋತು ಇತಿಹಾಸದ ಗರ್ಭ ಸೇರಿರುವಾಗ ಕರವೇ ರಾಜಕೀಯ ಪಕ್ಷದ ಸಾಧನೆಯನ್ನು ಕುತೂಹಲದಿಂದ ಎದುರುನೋಡಬೇಕಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜಕೀಯ ಮುಖವಾಣಿಯು ಯಾವ ರೀತಿಯಲ್ಲಿ ಪಕ್ಷ ಕಟ್ಟಿ ಮುನ್ನಡೆಸುತ್ತದೆ ಎನ್ನುವುದನ್ನು ಕಾದುನೋಡಬೇಕಷ್ಟೆ.
(ದಟ್ಸ್ ಕನ್ನಡ ವಾರ್ತೆ)