ಹಳ್ಳಿಗಳ ನಿರ್ಮಾಣಕ್ಕೆ ಚಿದಂಬರಂ ಭೂಮಿಪೂಜೆ
ಬಾಗಲಕೋಟೆ, ನ. 2 : ನೆರೆಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಭಾಗಗಳನ್ನು ನೋಡಿದರೆ ಕರಳು ಚುರ್ರೆನುತ್ತದೆ. ಈ ಪ್ರದೇಶದ ಪುನರ್ ನಿರ್ಮಾಣ ಮಾಡುವುದಕ್ಕೆ ಯುಪಿಎ ಸರಕಾರ ಕಟಿಬದ್ಧವಾಗಿದೆ. ಕರ್ನಾಟಕ ಜನತೆಯ ಪರವಾಗಿ ತಮ್ಮ ಸರಕಾರ ನಿಲ್ಲುತ್ತದೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮುರಿದು ಬಿದ್ದ 25 ಹಳ್ಳಿಗಳನ್ನು ಮತ್ತೆ ಕಟ್ಟುವ ಯೋಜನೆಗೆ ಅವರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಶಿರಬಾಡಗಿಯಲ್ಲಿ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಕೇಂದ್ರ ಸರಕಾರದಿಂದ ಸಾಧ್ಯವಾದ ಎಲ್ಲ ನೆರವನ್ನೂ ಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.
ನೆರೆ ಹಾವಳಿಯನ್ನು ಮೆಟ್ಟಿನಿಲ್ಲುವ ಕರ್ನಾಟಕ ರಾಜ್ಯದ ಪ್ರಯತ್ನಕ್ಕೆ ಯುಪಿಎ ಸರಕಾರ ಹೆಗಲೆಣೆಯಾಗಿ ನಿಲ್ಲುತ್ತದೆ. ಬೇಕಾದಷ್ಟು ಸ್ಕೀಮುಗಳಿವೆ. ಅವುಗಳನ್ನು ಪುನರ್ ನಿರ್ಮಾಣ ಯಜ್ಞಕ್ಕೆ ತೊಡಗಿಸಲು ತಾವು ಬದ್ಧ ಎಂದೂ ಅವರು ಘೋಷಿಸಿದರು. ಸಂತ್ರಸ್ತರಿಗೆ ಮನೆ ಕಟ್ಟಿಕೊಡಲು ಮುಂದಾದ ರಾಜ್ಯದಲ್ಲಿ ನೆಲೆಯೂರಿರುವ ಕಾರ್ಪೋರೇಟ್ ಕಂಪನಿಗಳ ಉದಾರ ಕೊಡುಗೆಯನ್ನು ಅವರು ಮನಸಾರೆ ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ ಮುಂತಾದವರು ಹಾಜರಿದ್ದರು.
(ದಟ್ಸ್ ಕನ್ನಡ ವಾರ್ತೆ)