ಯಡಿಯೂರಪ್ಪ ಕೆಳಗಿಳಿಯಬೇಕು : ಶೆಟ್ಟರ್
ರಾಜ್ಯದಲ್ಲಿ ಬಿಜೆಪಿ ಸರಕಾರ ಉಳಿಯಬೇಕಾದರೆ ನಾಯಕತ್ವ ಬದಲಾವಣೆ ಮಾಡಿ, ಯಡಿಯೂರಪ್ಪ ಮುಖ್ಯವಾಗುವುದಾದರೆ ಸರಕಾರವನ್ನು ಬಲಿ ಕೊಡಲು ಸಿದ್ಧರಾಗಿ ಎಂಬುದನ್ನು ಹೈಕಮಾಂಡ್ ಗೆ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿ ನಿಂತಿರುವ ಶೆಟ್ಟರ್ ಸ್ಪಷ್ಟಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಸಂಪುಟ ಸೇರುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ಆಪ್ತವಲಯಕ್ಕೆ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಮಂತ್ರಿ ಮಾಡುವಂತೆ ಕೋರಿಕೊಂಡೆ ಆಗ ನಿರ್ಲಕ್ಷ್ಯ ಮಾಡಿದರು. ಹುಬ್ಬಳ್ಳಿಯಲ್ಲಿ ಸರಕಾರಿ ಕಾರ್ಯಕ್ರಮವಾದರೂ ನನ್ನನ್ನು ಅಹ್ವಾನಿಸುವುದಿಲ್ಲ. ಸೌಜನ್ಯಕ್ಕೂ ನನ್ನನ್ನು ಮಾತನಾಡಿಸುವುದಿಲ್ಲ. ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂಬ ಮಾತು ಹೇಳಿದ ನಂತರ ಕ್ಷೇತ್ರದ ಕೆಲಸಗಳಾಗುತ್ತವೆ.
ಯಡಿಯೂರಪ್ಪ ಶಾಸಕರನ್ನು ಎಷ್ಟು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದರೆ ಹತ್ತು ಶಾಸಕರನ್ನು ಗುಟ್ಟಾಗಿ ಕರೆದು ಕೇಳಿ, ಯಾವುದೇ ಗುಂಪು ಶಕ್ತಿ ಪ್ರದರ್ಶನ ಮಾಡುವ ಅಗತ್ಯವೇನು ಬೀಳುವುದಿಲ್ಲ. ಎಲ್ಲ ಶಾಸಕರು ಬೇಸತ್ತಿದ್ದಾರೆ ಎಂದು ಶೆಟ್ಟರ್ ತಮ್ಮ ನೋವನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)