ಎಲ್ಲ ಬಿಕ್ಕಟ್ಟಿಗೆ ಈಯಮ್ಮನೇ ಕಾರಣ : ಶಾಂತಾ
ಶೋಭಾ ಕರಂದ್ಲಾಜೆ ಕಾರ್ಯವೈಖರಿ, ವಿವಿಧ ಇಲಾಖೆಯಲ್ಲಿನ ಹಸ್ತಕ್ಷೇಪ, ಸಚಿವ-ಸಂಸದರ ನಿರ್ಲಕ್ಷ್ಯದ ವಿರುದ್ಧ ರೆಡ್ಡಿ ಸಹೋದರರು, ಶ್ರೀರಾಮುಲು, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮತ್ತು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸದಾನಂದ ಗೌಡ ಅವರು ಧ್ವನಿ ಎತ್ತಿದ್ದರು. ಆದರೆ, ಬಿಜೆಪಿಯ 'ಐರನ್ ಲೇಡಿ' ಎಂಬಂತೆ ಬಿಂಬಿತವಾಗಿರುವ ಶೋಭಾ ವಿರುದ್ಧ ಮಹಿಳೆಯರೊಬ್ಬರು ಪ್ರಥಮ ಬಾರಿಗೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯಲ್ಲಿ ಉದ್ಭವಾಗಿರುವ ಎಲ್ಲಾ ಬಿಕ್ಕಟ್ಟಿಗೆ ಈಯಮ್ಮನೇ ಕಾರಣ. ಬೇರೆ ಸಚಿವ ಕೆಲಸದಲ್ಲಿ ಅನವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿದ್ದಾಳೆ. ಈ ರಾಜ್ಯದ ಸೆಕೆಂಡ್ ಮುಖ್ಯಮಂತ್ರಿ ತಾನೇ ಎಂಬಂತೆ ದುರಹಂಕಾರದಿಂದ ವರ್ತಿಸುತ್ತಿದ್ದಾಳೆ ಎಂದು ಶಾಂತಾ ಶಾಂತವಾಗಿಯೇ ಶೋಭಾ ವಿರುದ್ಧ ಹರಿಹಾಯ್ದಿದ್ದಾರೆ.
ನೆರೆ ಪರಿಹಾರ ಕಾರ್ಯದಲ್ಲೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಲಿ, ಸಂಸದರನ್ನಾಗಲಿ ವಿಶ್ವಾಸಕ್ಕೆ ತೆಗೆಕೊಂಡಿಲ್ಲ. ಎಲ್ಲ ತಾನು ಹೇಳಿದಂತೆಯೇ ನಡೆಯಬೇಕೆಂಬಂತೆ ವರ್ತಿಸುತ್ತಿದ್ದಾಳೆ. ಬಾಯಿ ಮುಚ್ಚಿಕೊಂಡಿದ್ದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತಿತ್ತು. ಆದರೆ, ಈಗ ರಾಜೀನಾಮೆ ಬಗ್ಗೆ ಮಾತನಾಡುತ್ತಿದ್ದಾಳೆ. ಈಯಮ್ಮ ರಾಜೀನಾಮೆ ನೀಡಲೇಬೇಕು. ಆಗಲೇ ಎಲ್ಲ ಬಿಕ್ಕಟ್ಟೂ ಬಗೆಹರಿಯುತ್ತವೆ ಎಂದು ಶೋಭಾ ವಿರುದ್ಧ ಶಾಂತಾ ಕೆಂಡಕಾರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)