ಗಡಿಪ್ರದೇಶದಲ್ಲಿ 40 ಕನ್ನಡಶಾಲೆ : ಬೆಲ್ಲದ್
ಚಿತ್ರದುರ್ಗ,ಅ.29: ಗಡಿ ಪ್ರದೇಶಗಳಲ್ಲಿನ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಸುಧಾರಿಸುವ ಹಲವಾರು ಪ್ರಯತ್ನಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ್ ಗುರಪ್ಪ ಬೆಲ್ಲದ್ ಆಶ್ವಾಸನೆ ನೀಡಿದ್ದಾರೆ. ಗಡಿಗಳಲ್ಲಿನ ಅನೇಕ ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ಶಾಲೆಗಳ ಗುಣಮಟ್ಟವನ್ನು ಖುದ್ದಾಗಿ ನೋಡಿಬಂದ ನಂತರ ಅವರು ಇಲಾಖಾ ಅಧಿಕಾರಿಗಳ ಸಭೆಯನ್ನು ಬುಧವಾರ ಇಲ್ಲಿ ನಡೆಸಿದರು.
ಕರ್ನಾಟಕದ ಗಡಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಗೋವಾ ಹೀಗೆ ಐದು ರಾಜ್ಯಗಳನ್ನು ತಾಕುತ್ತದೆ. ತಮ್ಮ ಪ್ರಾಧಿಕಾರದ ವ್ಯಾಪ್ತಿಗೆ ಆ ಐದೂ ರಾಜ್ಯಗಳ ಗಡಿ ಪ್ರದೇಶ ಬರುತ್ತಿದ್ದು ಅಲ್ಲೆಲ್ಲ ಕಲಿಯುವ ಕನ್ನಡ ಮಕ್ಕಳ ಶೈಕ್ಷಣಿಕ ಏಳ್ಗೆಗೆ ಮಹತ್ವ ನೀಡಲಾಗುವುದು ಎಂದು ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಲ್ಲದ್ ತಿಳಿಸಿದರು.
ಪ್ರಾಯೋಗಿಕವಾಗಿ ಕನ್ನಡ ಮಾಧ್ಯಮದ 40 ಶಾಲೆಗಳನ್ನು ಗಡಿ ಪ್ರದೇಶಗಳಲ್ಲಿ ತೆರೆಯುವ ಪ್ರಸ್ತಾವನೆ ಪ್ರಾಧಿಕಾರದ ಮುಂದಿದೆ. ಪ್ರಾಧಿಕಾರ 2009 ಮಾರ್ಚ್ ತಿಂಗಳಲ್ಲಿ ಆರಂಭವಾಗಿದ್ದು ಸರಕಾರ ಗಡಿ ಪ್ರದೇಶ ಕನ್ನಡ ಶಾಲಾ ಅಭಿವೃದ್ಧಿಗೋಸ್ಕರ 10 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ ಎಂದೂ ಅವರು ವಿವರಿಸಿದರು. ಶಾಲೆಗಳಲ್ಲದೆ, ತಾಲೂಕು ಕೇಂದ್ರಗಳಲ್ಲಿ 500 ಆಸನ ವ್ಯವಸ್ಥೆಯಿರುವ ಸಾಂಸ್ಕೃತಿಕ ಭವನಗಳನ್ನು ಕಟ್ಟುವ ಯೋಜನೆ ಇದೆ. ಸರಕಾರದ ಇದೇ 10 ಕೋಟಿ ರೂ ಅನುದಾನದಲ್ಲಿ ಗ್ರಂಧಾಲಯಗಳನ್ನು ತೆರೆಯಲಾಗುವುದು ಎಂದೂ ಚಂದ್ರಕಾಂತ್ ತಿಳಿಸಿದರು. ಜಿಲ್ಲಾಧಿಕಾರಿ ಅಮಲನ್ ಆದಿತ್ಯ ಬಿಸ್ವಾಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)