ಯಡಿಯೂರಪ್ಪಗೆ ಚನ್ನಪಟ್ಟಣ ರೈತರ ಹಿಡಿಶಾಪ
ವಿದ್ಯುತ್ನ್ನೇ ನಂಬಿ ಕೃಷಿ ಮತ್ತು ಸಣ್ಣ ಕೈಗಾರಿಕೆಗಳನ್ನ ನಡೆಸುತ್ತಿರುವ ಮಾಲೀಕರಿಗೆ ಅನಿಯಮಿತ ಲೋಡ್ಶೆಡ್ಡಿಂಗ್ನಿಂದ ಸಂಕಷ್ಟದಲ್ಲೇ ಬದುಕು ದೂಡುವಂತಾಗಿದೆ. ಬಿಜೆಪಿ ಸರ್ಕಾರದ ಉದಾಸೀನ ಮನೋಭಾವದಿಂದ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎನ್ನವಂತಾಗಿದೆ. ಇದೇ ರೀತಿ ಮುಂದುವರೆದರೆ ಬಿಜೆಪಿ ಸರ್ಕಾರದ ವಿರುದ್ದ ಉಗ್ರ ಹೋರಾಟನಡೆಸುವುದಾಗಿ ರೈತರ ಮುಖಂಡ ಚಿಕ್ಕವೀರೇಗೌಡ ಎಚ್ಚರಿಸಿದ್ದಾರೆ.
ರೈತರ ಹೆಸರೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ರೈತಸಮುದಾಯವನ್ನ ನಾಶಮಾಡುವತ್ತ ಅಧಿಕಾರ ನಡೆಸುತ್ತಿದ್ದಾರೆ. ಒಂದೆಡೆ ನೆರೆಯಿಂದ ರೈತರು ಬೀದಿಗೆ ಬಿದ್ದಿದ್ದಾರೆ ಇನ್ನೊಂದೆಡೆ ವಿದ್ಯುತ್ ಕ್ಷಾಮದಿಂದ ರೈತರು ಆತ್ಮಹತ್ಯೆಗೆ ಶರಣಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಒಂದು ರೀತಿಯಲ್ಲಿ ಉಪಯೋಗವಾಗುಂತಹ ಯೋಜನೆಗಳನ್ನು ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗುವುದರಿಂದ ವಿದ್ಯುತ್ ಕ್ಷಾಮ ಎದುರಿಸುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು ವಿದ್ಯುತ್ ಉತ್ಪಾದನೆ ಮಾಡುವ ಜಲಾಶಯಗಳೆಲ್ಲ ತುಂಬಿ ಹರಿಯುತ್ತಿದ್ದರೂ ವಿದ್ಯುತ್ ಕ್ಷಾಮ ಆವರಿಸುವಂತೆ ಬಿಜೆಪಿ ಸರ್ಕಾರ ಮಾಡುತ್ತಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ನೇಗಿಲಯೋಗಿಗಳು ಸಂಕಷ್ಟದ ಸುಳಿಯಲ್ಲೇ ಸಿಲುಕಿದ್ದಾರೆ, ಆದರೂ ನಿರ್ಲಕ್ಷ್ಯ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ದ ರೈತರು ತಿರುಗಿಬೀಳುವ ಕಾಲ ದೂರವಿಲ್ಲವೆಂದು ರೈತಸಂಘ ಎಚ್ಚರಿಸಿದೆ.
ಒಟ್ಟಾರೆ ಸರ್ಕಾರಕ್ಕೆ ಇಚ್ಚಾಶಕ್ತಿ ಮತ್ತು ಅನುಭವದ ಕೊರತೆಯೇ ರಾಜ್ಯ ಕಗ್ಗತ್ತಲಲ್ಲಿ ಮುಳುಗುವಂತಾಗಿದೆ ಎಂದು ಜನತೆ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ನ್ನೇ ನಂಬಿ ಕುಳಿತಿರುವ ಮಂದಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಸರ್ಕಾರ ಇನ್ನು ಮುಂದಾದರೂ ಮಲತಾಯಿ ಧೋರಣೆ ಬಿಟ್ಟು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವುದೇ ಎಂಬುದನ್ನ ಕಾಲವೇ ಉತ್ತರಿಸಬೇಕಾಗಿದೆ.