ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ವಿರುದ್ಧ ಕೇಸ್
ಕಂಪನಿಯ ವ್ಯವಸ್ಥಾಪಕ ಪ್ರಶಾಂತ್ ಅವರನ್ನು ಅಪಹರಿಸಿ ಥಳಿಸಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಂದಾಯ ಸಚಿವ ಕರುಣಾಕರರೆಡ್ಡಿ ಅವರ ಮನೆಗೆ ಎಳೆದೊಯ್ದು ಬೆದರಿಸಿದ್ದಾರೆ ಎಂದು ಉಪ್ಪಾರಪೇಟೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸೋಮಶೇಖರರೆಡ್ಡಿ 2ನೇ ಆರೋಪಿ. ಹೈದರಾಬಾದ್ ಮೂಲದ ಜಿವಿಪಿಆರ್ ಕಂಪನಿಯ ಜನರಲ್ ಮ್ಯಾನೇಜರ್ ಮಾಧವಗೌಡ ಮೊದಲನೇ ಆರೋಪಿಯಾಗಿದ್ದಾರೆ.
ಇಂಧನ ಇಲಾಖೆ ಜಾರಿಗೊಳಿಸುತ್ತಿರುವ ಕೊಡತಿ ಯೋಜನೆಗೆ ಅಕ್ಟೋಬರ್ 24 ರಂದು ಟೆಂಡರ್ ಸಲ್ಲಿಸಲು ಕೊನೆಯದಾಗಿತ್ತು. ಬೆಂಗಳೂರಿನ ಆನಂದರಾವ್ ವೃತ್ತದಲ್ಲಿರುವ ಕೆಪಿಸಿಎಲ್ ಕಚೇರಿಗೆ ಹೋಗಿ ಟೆಂಡರ್ ಸಲ್ಲಿಸಲು ಎನ್ ಎನ್ ಸಿ ಕಂಪನಿಯ ಮ್ಯಾನೇಜರ್ ಪ್ರಶಾಂತ್ ಶೆಟ್ಟಿ ಬಂದಿದ್ದರು. ಆಗ ಕಚೇರಿ ಪ್ರವೇಶಕ್ಕೆ ಅಡ್ಡಿಪಡಿಸಿದ್ದರು. ಈ ನಡುವೆಯೂ ಪ್ರಶಾಂತ್ ಶೆಟ್ಟಿ ಹಾಗೂ ಇತರರು ಕಚೇರಿಗೆ ಹೋಗಿ ಟೆಂಡರ್ ಹಾಕಿ ಹೊರಬರುತ್ತಿದ್ದಾಗ ಕೆಲವರು ಕ್ವಾಲೀಸ್ ಕಾರಿನಲ್ಲಿ ಬಂದು ಅವರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ. ಬಳಿಕ ಕಂದಾಯ ಸಚಿವ ಕರುಣಾಕರರೆಡ್ಡಿ ಮನೆಗೆ ಕರೆದುಕೊಂಡು ಹೋಗಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)