ಸಿಎಂ ಧೋರಣೆ ಖಂಡಿಸಿ ರೆಡ್ಡಿಗಳ ಸಭೆ
ಅದಿರು ಲಾರಿಗಳ ಮೇಲೆ ಹೆಚ್ಚುವರಿ ಸುಂಕ ಸಿಎಂ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನಗೊಂಡಿರುವುದು ಒಂದಡೆಯಾದರೆ, ಸಚಿವರ ಖಾತೆಗಳಲ್ಲಿ ಸಿಎಂ ಮತ್ತು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರ ಹಸ್ತಕ್ಷೇಪ, ಗದಗ ಡಿಸಿ ವರ್ಗಾವಣೆ, ನೆರೆ ಸಂತ್ರಸ್ಥರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ರಚಿಸಿರುವ ಆಸರೆಗೆ ಸಂಸದ ರಾಜೀವ ಚಂದ್ರಶೇಖರ್ ಹಾಗೂ ನೋಡಲ್ ಅಧಿಕಾರಿಯಾಗಿ ಜಾಮದಾರ್ ಅವರನ್ನು ನೇಮಿಸಿರುವುದು. ಸರಕಾರದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ತೋರಿರುವ ನಿರ್ಲಕ್ಷ್ಯ ಸೇರಿದಂತೆ ವಿವಿಧ ಅಂಶಗಳು ಚರ್ಚೆಯಲ್ಲಿ ನಡೆಯುವ ಸಾಧ್ಯತೆ ಇದೆ.
ಸಭೆಯಲ್ಲಿ ಸಚಿವರಾದ ಜನಾರ್ದನರೆಡ್ಡಿ. ಕರುಣಾಕರರೆಡ್ಡಿ, ಶ್ರೀರಾಮುಲು, ಶಿವನಗೌಡ ನಾಯಕ್, ಆನಂದ ಅಸ್ನೋಟಿಕರ್, ಗೂಳಿಹಟ್ಟಿ ಶೇಖರ್, ಶಿವರಾಜ್ ತಂಗಡಗಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಶಾಸಕ ಆನಂದಸಿಂಗ್, ರಾಜೂಗೌಡ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅದಿರು ಲಾರಿ ಸುಂಕ ಖಚಿತ, ಸಿಎಂ
ಅದಿರು ಲಾರಿಗಳ ಮೇಲೆ ಸುಂಕ ವಿಧಿಸುವ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಶಿಕಾರಪುರದಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾರಿಗಳಿಗೆ ಹೆಚ್ಚುವರಿ ಸುಂಕ ವಿಧಿಸುತ್ತಿರುವುದು ಕೇವಲ ಅದಿರು ಲಾರಿಗಳಿಗಷ್ಟೇ ಅಲ್ಲ. ರಾಜ್ಯದ ರಸ್ತೆಗಳು ತೀರಾ ಹದಗೆಟ್ಟಿವೆ. ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ. ಆದ್ದರಿಂದ ಸುಂಕ ಅನಿವಾರ್ಯ ಎಂದು ಯಡಿಯೂರಪ್ಪ ವಿವರಿಸಿದರು.
ಹಸ್ತಕ್ಷೇಪ ಮಾಡಿಲ್ಲ, ಶೋಭಾ
ತಾವು ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ನನ್ನ ಮೇಲಿನ ಆರೋಪ ನಿರಾಧಾರ. ಸರಕಾರದಲ್ಲಿ ಯಾವುದೇ ಗೊಂದಲ ಸೃಷ್ಟಿಯಾದಾಗಲೂ ತಾವೇ ಅದರ ಕೇಂದ್ರ ಬಿಂದು ಎಂದು ಬಿಂಬಿಸಲಾಗುತ್ತಿದೆ. ಆಗಲೂ ಅದೇ ರೀತಿ ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಶೋಭಾ ಕರಂದ್ಲಾಜೆ ಹೇಳಿದರು. ರಾಜಕೀಯ ಚಟುವಟಿಕೆಗಳಿಗೂ, ಪರಿಹಾರ ವಿತರಣೆಗೂ ಯಾವುದೇ ಸಂಬಂಧವಿಲ್ಲ. ಪರಿಹಾರ ಕಾರ್ಯಕ್ಕೆ ಹಿನ್ನೆಡೆಯಾಗಿಲ್ಲ ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)